ದೇವರಹಿಪ್ಪರಗಿ: ರಂಭಾಪುರಿಶ್ರೀಗೆ ಅಗೌರವ ತೋರಿ, ಅಮಾನವೀಯ ರೀತಿಯಲ್ಲಿ ವರ್ತಿಸಿದ ಘಟನೆ ಖೇದಕರ ಹಾಗೂ ಖಂಡನೀಯ ಎಂದು ಜಡಿಮಠದ ಜಡಿಸಿದ್ಧೇಶ್ವರಶ್ರೀ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ರಂಭಾಪುರಿಶ್ರೀಗಳಿಗೆ ಅಗೌರವ ತೋರಿ ಅಮಾನವೀಯ ರೀತಿಯಲ್ಲಿ ವರ್ತಿಸಿದ ಘಟನೆ ಖಂಡಿಸಿ ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ರಂಭಾಪುರಿಶ್ರೀಗಳ ಭಕ್ತರ ಸಭೆ ಹಾಗೂ ಮನವಿ ಸಲ್ಲಿಕೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಶ್ರೀಗಳ ಕುರಿತು ಇಲ್ಲಸಲ್ಲದ ಆರೋಪ ಮಾಡುವುದರ ಜೊತೆಗೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಲಾಗಿದೆ. ಆರೋಪಿಗಳಿಗೆ ಕಾಲವೇ ತಕ್ಕ ಉತ್ತರ ನೀಡುತ್ತದೆ’ ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ. ಕುದರಿ ಮಾತನಾಡಿ, ‘ಶ್ರೀಗಳ ವಿರುದ್ಧ ನಡೆದ ಈ ಘಟನೆ ಭಕ್ತರ ಮನಸ್ಸಿಗೆ ಬಹಳ ನೋವು ತಂದಿದೆ. ರಾಜ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಈ ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದರು. ನಂತರ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್, ‘ಶ್ರೀಗಳಿಗೆ ಅಗೌರವ ತೋರಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದರು.
ಸ್ಥಳೀಯ ಶ್ರೀಗಳು, ಪ್ರಗತಿಪಟ್ಟಣ ಸಹಕಾರ ಬ್ಯಾಂಕ್ ನಿರ್ದೇಶಕ ಬಾಬುಗೌಡ ಪಾಟೀಲ(ಜಿಡ್ಡಿಮನಿ), ಜಂಗಮಾಭಿವೃದ್ಧಿ ಸಂಘದ ನಗರ ಘಟಕದ ಅಧ್ಯಕ್ಷ ನೀಲಯ್ಯ ಅರಳಿಮಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ ಹಿರೇಮಠ, ಉಮಾಕಾಂತ ಸೊನ್ನದ, ಬಸಯ್ಯ ಮಲ್ಲಿಕಾರ್ಜುನಮಠ, ರಮೇಶ ಮಶಾನವರ, ಕಾಸಯ್ಯ ಸದಯ್ಯನಮಠ, ಕುಮಾರಸ್ವಾಮಿ ಹಿರೇಮಠ, ವೀರಭದ್ರಯ್ಯ ಇಂಡಿಮಠ, ಈರಣ್ಣಾ ಒಂಟೆತ್ತೀನ, ಮಲ್ಲು ಭಂಡಾರಿ, ತಿಪ್ಪಣ್ಣಾ ಮೇಲಿನಮನಿ, ಅಶೋಕ ಕೊಂಡಗೂಳಿ, ಶಿವಾನಂದ ರುದ್ರಗೌಡರ, ಶಿವಾನಂದ ವಸ್ತ್ರದ, ಮಂಜುನಾಥ ಮಲ್ಲಿಕಾರ್ಜುನಮಠ, ವೀರೇಶ ಮಠಪತಿ, ವೀರಭದ್ರಯ್ಯ ಮಲ್ಲಿಕಾರ್ಜುನಮಠ, ಮಾದೇಶ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.