ADVERTISEMENT

ಕಾಂಗ್ರೆಸ್‌ ಸಭೆ ರದ್ದುಪಡಿಸಿದ ಡಿ.ಕೆ.ಶಿವಕುಮಾರ್‌: ಕಾರ್ಯಕರ್ತರ ನಿರಾಶೆ

ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 12:19 IST
Last Updated 16 ಅಕ್ಟೋಬರ್ 2021, 12:19 IST
ಸಿಂದಗಿಯ ರಾಜರಾಜೇಶ್ವರಿ ಕಲ್ಯಾಣಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಅವರ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿದರು. ಪ್ರಕಾಶ ರಾಠೋಡ, ಡಾ.ಅಜೇಯಸಿಂಗ್, ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ ಇದ್ದಾರೆ.
ಸಿಂದಗಿಯ ರಾಜರಾಜೇಶ್ವರಿ ಕಲ್ಯಾಣಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಅವರ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿದರು. ಪ್ರಕಾಶ ರಾಠೋಡ, ಡಾ.ಅಜೇಯಸಿಂಗ್, ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ ಇದ್ದಾರೆ.   

ಸಿಂದಗಿ(ವಿಜಯಪುರ): ಪಟ್ಟಣದ ರಾಜರಾಜೇಶ್ವರಿ ಕಲ್ಯಾಣಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಏಕಾಏಕಿ ರದ್ದುಗೊಳಿಸಿ, ವೇದಿಕೆಯಿಂದ ಇಳಿದು ಹೊರನಡೆದರು.

ಬಹಿರಂಗ ಸಭೆ ಬೇಡ. ಕಾಂಗ್ರೆಸ್ ಪಕ್ಷದ ಚುನಾವಣಾ ಜಿಲ್ಲಾ ವೀಕ್ಷಕರು, ರಾಜ್ಯಮಟ್ಟದ ಪದಾಧಿಕಾರಿಗಳ ಆಂತರಿಕ ಸಭೆ ನಡೆಯಲಿ. ಕೇವಲ ವೀಕ್ಷಕರು, ರಾಜ್ಯಮಟ್ಟದ ಪದಾಧಿಕಾರಿಗಳು ಮಾತ್ರ ಬೇರೆಡೆ ಒಳಕೋಣೆಯಲ್ಲಿ ನಡೆಸುವ ಸಭೆಗೆ ಬರಬೇಕು. ಇಲ್ಲಿ ಯಾರೂ ರಿಕಾರ್ಡಿಂಗ್ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಶಾಸಕರಾದ ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ, ಡಾ.ಅಜೇಯಸಿಂಗ್, ಬಾಪುಗೌಡ ದರ್ಶನಾಪೂರ ಹಾಗೂ ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೂ ಆಲಗೂರ, ಪ್ರಕಾಶ ರಾಠೋಡ, ನಂಜಯ್ಯನಮಠ, ಮಾಜಿ ಶಾಸಕ ಶರಣಪ್ಪ ಸುಣಗಾರ, ಸುಭಾಸ ಛಾಯಾಗೋಳ, ಎಸ್.ಎಂ.ಪಾಟೀಲ ಗಣಿಹಾರ, ಮೈಬೂಬ ತಾಂಬೋಳಿ(ಎಂ.ಆರ್.ಟಿ) ಎಲ್ಲ ಮುಖಂಡರು ಅವರನ್ನು ಹಿಂಬಾಲಿಸಿದರು.

ADVERTISEMENT

ಡಿ.ಕೆ.ಶಿವಕುಮಾರ್‌ ನಡೆ ಸಭೆಯಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ನಿರಾಶೆ ತರಿಸಿತು.

ಭೂಸನೂರ ಪಾದಯಾತ್ರೆ:ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಗ್ರಾಮದಲ್ಲಿ ಡೊಳ್ಳು ಬಾರಿಸುತ್ತ ಅಭ್ಯರ್ಥಿಯನ್ನು ಸಭಾ ವೇದಿಕೆಗೆ ಕರೆತರಲಾಯಿತು.

ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ, ಬಿಜೆಪಿ ಮುಖಂಡ ಸಂತೋಷ ಪಾಟೀಲ ಮತಯಾಚಿಸಿ ಮಾತನಾಡಿದರು. ಅಭ್ಯರ್ಥಿ ಭೂಸನೂರ ಜನಪರ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಹಲವರು ಬಿಜೆಪಿಗೆ ಸೇರ್ಪಡೆಯಾದರು.

ನಾಜಿಯಾ ಮತಯಾಚನೆ: ಸಿಂದಗಿ ತಾಲ್ಲೂಕಿನ ಗೋಲಗೇರಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಶನಿವಾರ ಪಾದಯಾತ್ರೆ ಮೂಲಕ ಮತಯಾಚಿಸಿದರು.

ಮನೆ, ಮನೆಗೂ ತೆರಳಿ ನಿಮ್ಮ ಮನೆ ಮಗಳಿಗೆ ಮತ ನೀಡಿ ಹಳ್ಳಿಗಳ ಅಭಿವೃದ್ದಿಗಾಗಿ ಕೈಜೋಡಿಸಿ ಎಂದು ಕೋರಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗೊಲ್ಲಾಳಪ್ಪಗೌಡ ಪಾಟೀಲ, ಜಿಲ್ಲಾ ಪ್ರಧಾನಕಾರ್ಯದರ್ಶಿ ಅರವಿಂದ ಹಂಗರಗಿ, ಯುವ ಘಟಕದ ಅಧ್ಯಕ್ಷ ಸಿದ್ದನಗೌಡ ಪಾಟೀಲ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಹೊಟಗಾರ, ಜಾಫರ ಅಂಗಡಿ, ಅಮೀನಸಾಬ ಶತಾಬ್ದಿ ಮುಂತಾದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.