ವಿಜಯಪುರ: ಪಾಲಕರು ತಮ್ಮ ಮಕ್ಕಳನ್ನು ಅಂಕ ಮತ್ತು ಹಣ ಗಳಿಕೆಗೆ ಸೀಮಿತ ಮಾಡಬಾರದು. ಈ ಸಂಬಂಧ ಅವರ ಮೇಲೆ ಮಾನಸಿಕ ಒತ್ತಡ ಹೇರಬಾರದು ಎಂದು ಪ್ರಸಿದ್ಧಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಹೇಳಿದರು.
ನಗರದ ಬಿಎಲ್ ಡಿಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ಅಮೃತ ಮಹೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳುಬದುಕಿನಲ್ಲಿ ಆಶಾಭಾವನೆ ಇಟ್ಟು ಕೊಳ್ಳಬೇಕು, ಸಾಧಕರಾಗಬೇಕು, ನಿಸ್ವಾರ್ಥಿಗಳಾಗಬೇಕು, ಜ್ಞಾನದಾಹಿಗಳಾಗಬೇಕು, ವಿದ್ಯಾರ್ಥಿಗಳು ವಿದ್ಯೆ, ವಿವೇಕ, ವಿದ್ವತ್, ಹೃದಯ ವೈಶಾಲ್ಯತೆ ಬೆಳಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ತಂಬಾಕಿನ ತಲುಬಿಗೆ ಒಳಗಾಗಬಾರದು, ಗುಟ್ಕಾ ಸೇವನೆ ಬಿಡಬೇಕು ಎಂದು ಬುದ್ದಿಮಾತು ಹೇಳಿದರು.
ವಿದ್ಯಾರ್ಥಿಗಳು ಶಾಂತ ಮನಸ್ಸು, ಇಂದ್ರಿಯ ನಿಗ್ರಹ, ಸಹನೆ ಬೆಳಸಬೇಕು, ಸದಾ ಸಂತಸದಿಂದ ಇರಬೇಕು, ಶ್ರದ್ಧೆ ಬೆಳಸಿಕೊಳ್ಳಬೇಕು ಹಾಗೂ ಸಮಾದಾನ ಚಿತ್ತ ಬೆಳಸಬೇಕುಮಕ್ಕಳಿಗೆ ಬೇಕಾದ ಆರು ಸಂಪತ್ತು ಎಂದರು.
ಶಿಕ್ಷಕರಾದವರು ಶಾಂತ ಸ್ವಭಾವದವರಾಗಿರಬೇಕು, ಪ್ರೀತಿಯಿಂದ ಕಲಿಸಬೇಕು.ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಬೇಕು. ತಮ್ಮ ವಿದ್ಯಾರ್ಥಿಗಳಲ್ಲಿ ಶಿಸ್ತು, ಶಿಷ್ಟಾಚಾರ, ಧೈರ್ಯ, ಸ್ಥೈರ್ಯ ಬೆಳಸಲು ಆದ್ಯತೆ ನೀಡಬೇಕು ಎಂದರು.
ಜ್ಞಾನದ, ಸುಜ್ಞಾನದ ಬೆಳಕು ಇದ್ದಲ್ಲಿ ಅಜ್ಞಾನ ದೂರವಾಗುತ್ತದೆ ಎಂದು ಹೇಳಿದರು.
ಬಂಥನಾಳ ಶಿವಯೋಗಿ ಶ್ರೀಗಳ ಇಚ್ಛಾಶಕ್ತಿ, ಫ.ಗು.ಹಳಕಟ್ಟಿಯವರ ಜ್ಞಾನಶಕ್ತಿ ಹಾಗೂ ಬಂಗಾರಮ್ಮ ಸಜ್ಜನ, ಬಿ.ಎಂ.ಪಾಟೀಲರ ಕ್ರೀಯಾಶಕ್ತಿಯಿಂದ ಬಿಎಲ್ಡಿಇ ಸಂಸ್ಥೆ ಬೆಳೆದು ನಿಂತಿದೆಎಂದರು.
ಬೆಳಗಾವಿಯ ಕೆಎಲ್ಇ ಅಕ್ಕನಾದರೆ ವಿಜಯಪುರದ ಬಿಎಲ್ಡಿಇ ಅದರತಂಗಿಯಾಗಿದೆ ಎಂದು ಶ್ಲಾಘಿಸಿದರು.
ಅನ್ನದಾಸೋಹ ಮಾಡಿದಾಗ ಒಂದು ಹೊತ್ತು ಹೊಟ್ಟೆ ತುಂಬುತ್ತದೆ. ಅದೇ ವಿದ್ಯಾದಾನದಿಂದ ಇಡೀ ಬದುಕು ತುಂಬುತ್ತದೆ.ವಿದ್ಯಾ ಸಂಪತ್ತು ಗಳಿಸಬೇಕು ಮತ್ತು ದಾನ ಮಾಡಬೇಕು ಎಂದರು.
ವಿಜಯಪುರ ಜ್ಞಾನ ಯೋಗ ಆಶ್ರಮ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಎ.ಎಂ.ಪಾಟೀಲ (ಬಿಜ್ಜರಗಿ), ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ.ಆರ್.ಎಸ್.ಮುಧೋಳ, ಕುಲಸಚಿವ ಡಾ.ಆರ್.ವಿ.ಕುಲಕರ್ಣಿ, ಆಡಳಿತಾಧಿಕಾರಿಗಳಾದ ಎಸ್.ಎಚ್.ಲಗಳಿ, ಬಿ.ಆರ್.ಪಾಟೀಲ, ಡಾ.ಕೆ.ಜಿ.ಪೂಜಾರಿ, ಪ್ರಾಚಾರ್ಯ ಡಾ. ಯು.ಎಸ್.ಪೂಜಾ ಉಪಸ್ಥಿತರಿದ್ದರು.
***
ವಿದ್ಯಾರ್ಥಿಗಳು ಏಕಾಗ್ರತೆ ಬೆಳಸಿಕೊಳ್ಳಬೇಕು, ಜೀವನದಲ್ಲಿ ಉನ್ನತ ಗುರಿ ಇಟ್ಟು ಕೊಳ್ಳಬೇಕು,ತಮ್ಮ ಸ್ವಂತ ಬಲದಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು
–ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ,ಹೃದ್ರೋಗ ತಜ್ಞೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.