ವಿಜಯಪುರ: ಜವಾಬ್ದಾರಿಯುತ ಸ್ಥಾನದಲ್ಲಿರುವ ಛಲವಾದಿ ನಾರಾಯಣಸ್ವಾಮಿ ಅವರು ಅಸಂಸದೀಯ ಪದಗಳನ್ನಾಡುವ ಮೂಲಕ ವಿಧಾನ ಪರಿಷತ್ ಘನತೆಗೆ ಕುಂದು ತಂದಿದ್ದು, ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಲಾಯಿತು.
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯ ಘಟಕದ ಸಂಚಾಲಕ ರಮೇಶ ಆಸಂಗಿ ಮಾತನಾಡಿ, ‘ವಿಧಾನ ಪರಿಷತ್ಗೆ ತನ್ನದೇ ಆದ ಘನತೆ ಇದೆ. ಪವಿತ್ರ ಮೇಲ್ಮನೆಯ ಪ್ರತಿಪಕ್ಷ ನಾಯಕ ಆಗಿರುವ ಛಲವಾದಿ ನಾರಾಯಣಸ್ವಾಮಿ ಅವರು, ಕೀಳುಮಟ್ಟದ ಭಾಷೆ ಪ್ರಯೋಗಿಸಿದ್ದಾರೆ. ಸಚಿವರ ಬಗ್ಗೆ ಅವಹೇಳನ ಮಾಡಿ, ಅಗೌರವ ತೋರಿದ್ದಾರೆ’ ಎಂದರು.
‘ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಪ್ರಶ್ನೆ ಮಾಡುವ ಹಕ್ಕು ಇದೆ. ಅದರಂತೆ, ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.
ಪ್ರಕಾಶ ಗುಡಿಮನಿ, ವಿನಾಯಕ ಗುಣಸಾಗರ, ಶರಣು ಸಿಂಧೆ, ಸಾಯಿನಾಥ ಬನಸೋಡೆ, ಪೀರಪ್ಪ ಕಟ್ಟಿಮನಿ, ಶೇಖರ ಕಾಣಿ, ರಾಜು ಸಿಂದಗೇರಿ, ಶಿವು ಗುಡಮಿ, ಲಕ್ಷ್ಮಣ ಏಳಗಿ, ಮುತ್ತು ಸುಲ್ಫಿ, ಸಾಗರ ಹೊಸಮನಿ, ಸುನೀಲ ಸಿಂಧೆ, ಪ್ರಕಾಶ ಕ್ಯಾತಗಿರಿ, ಅರುಣ ಗುಡಿಸಲಮನಿ, ರಾಘವೇಂದ್ರ ಪಡಗಾನೂರ ಇದ್ದರು.
ಪ್ರತಿಭಟನೆಯ ಎಚ್ಚರಿಕೆ
‘ಪ್ರಧಾನಿ ಮೋದಿ ಅವರ ವೈಫಲವನ್ನು ಪ್ರಶ್ನಿಸುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಅವರಿಗೆ ಸಿಂಹಸ್ವಪ್ನವಾಗಿದ್ದಾರೆ. ಅದನ್ನು ಸಹಿಸಲಾಗಿದೆ ಬಿಜೆಪಿ ಮುಖಂಡರು ಅವರ ವಿರುದ್ಧ ಕುತಂತ್ರ ರೂಪಿಸಿದ್ದಾರೆ. ಅವರನ್ನು ಗುರಿಯಾಗಿಸಿಕೊಂಡು ದಲಿತ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ದಲಿತರ ವಿರುದ್ಧ ದಲಿತರನ್ನೇ ಎತ್ತಿಕಟ್ಟಲಾಗುತ್ತಿದ್ದು ಬಿಜೆಪಿ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಮುಖಂಡ ಅಶೋಕ ಚಲವಾದಿ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.