ವಿಜಯಪುರ: ಶಿಕ್ಷಣವು ಇಂದು ಉಳ್ಳವರಿಗೆ ಮಾತ್ರ ದೊರೆಯುತ್ತಿದೆ. ಶಿಕ್ಷಣವು ಪ್ರತಿಯೊಬ್ಬರಿಗೂ ದೊರೆಯಬೇಕು ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಗಾಳಿ, ನೀರಿನಷ್ಟೇ ಸಹಜವಾಗಿ ಸಿಗಬೇಕು. ಕೇವಲ ಸರ್ಟಿಫಿಕೇಟ್ ಅಥವಾ ಅಂಕಗಳಿಗಾಗಿ ಶಿಕ್ಷಣ ಆಗಬಾರದು ಎಂದು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ ಹೇಳಿದರು.
ನಗರದಲ್ಲಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ಆರನೇ ಜಿಲ್ಲಾ ವಿದ್ಯಾರ್ಥಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಎಐಡಿಎಸ್ಓ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹನುಮಂತ ಎಸ್.ಎಚ್., ಶಿಕ್ಷಣ ಕ್ಷೇತ್ರ ಮೇಲಿಂದ ಮೇಲೆ ದಾಳಿಯನ್ನು ಎದುರಿಸುತ್ತಿದೆ ಆತಂಕ ವ್ಯಕ್ತಪಡಿಸಿದರು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ನೇತಾಜಿ ಅವರ ಕನಸಾದ ವೈಜ್ಞಾನಿಕ, ಧರ್ಮನಿರಪೇಕ್ಷಕ ಹಾಗೂ ಪ್ರಜಾಸತ್ತಾತ್ಮಕ ಶಿಕ್ಷಣದ ಕನಸನ್ನು ನನಸಾಗಿಲು ನಮ್ಮನ್ನಾಳಿದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಸರ್ಕಾರಗಳು ಕಡೆಗಣಿಸಿವೆ ಎಂದರು.
'ಅಚ್ಛೇ ದಿನ್' ತರುವ ಭರವಸೆ ನೀಡಿದ ಮೋದಿ ಸರ್ಕಾರವು ಮೊದಲನೆ ಬಜೆಟ್ನಲ್ಲಿ ಶಿಕ್ಷಣಕ್ಕೆ ಮೀಸಲಿಡಲಾಗುತ್ತಿದ್ದ ಶೇ 10ರಷ್ಟು ಅನುದಾನವನ್ನು ಶೇ 0.3ಕ್ಕಿಂತಲೂ ಕಡಿಮೆ ಮಾಡಿತು. ಅಲ್ಲದೆ, ಹೊಸ ಶಿಕ್ಷಣ ನೀತಿಯು ಖಾಸಗಿ ಶಾಲೆಗಳು ತಮಗಿಷ್ಟ ಬಂದಂತೆ ಶುಲ್ಕವನ್ನು ನಿಗದಿಗೊಳಿಸಲು ಕಾನೂನಾತ್ಮಕವಾಗಿ ಮುಕ್ತ ಅವಕಾಶ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಮುಂಬರುವ ದಿನಗಳು ಬಡ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರಾಳ ದಿನಗಳಾಗಿ ಪರಿಣಮಿಸಲಿವೆ ಎಂದರು.
ಶಿಕ್ಷಣ ವ್ಯಾಪಾರಿಕರಣ, ಸರ್ಕಾರಿ ಶಿಕ್ಷಣ ಸಂಸ್ಥೆಗಳು ಅಧೋಗತಿಗೆ ತಲುಪುತ್ತಿವೆ. ಇಂತಹ ಸಮಸ್ಯೆಗಳ ವಿರುದ್ಧ ಹೋರಾಟ ಬೆಳೆಸುವ ಅವಶ್ಯಕತೆ ಇದೆ ಎಂದು ಹೇಳಿದರು.
ನೂತನ ಜಿಲ್ಲಾ ಸಮಿತಿಯ ರಚನೆ:ಅಧ್ಯಕ್ಷರಾಗಿ ಸುರೇಖಾ ಕಡಪಟ್ಟಿ, ಉಪಾಧ್ಯಕ್ಷರಾಗಿ ರೆಹಮಾನ್, ಕಾರ್ಯದರ್ಶಿಯಾಗಿ ಕಾವೇರಿ ರಜಪೂತ, ಜಂಟಿ ಕಾರ್ಯದರ್ಶಿಯಾಗಿ ದೀಪಾ, ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಜಮೀರ್, ವಿಷ್ಣು, ಸದಾಶಿವ ಹಡಪದ, ಅಕ್ಷತಾ, ತೇಜಶ್ವಿನಿ ಆಯ್ಕೆಯಾದರು.
ಕೌನ್ಸಿಲ್ ಕಮಿಟಿ ಸಮಿತಿ ಸದಸ್ಯರಾಗಿ ಬಿಂದು, ಗೀತಾ, ಸುಶ್ಮಿತಾ, ಪೂಜಾ, ಶರಣು ವಾಲಿಕಾರ, ಚೇತನ್, ಭೀಮಣ್ಣ, ಸೈಯದ್, ಶಹೀದ್, ಗೀತಾ ಜಿ, ಪುನೀತ್, ಬಂಗಾರವ್ವ, ರೋಹಿಣಿ, ಐಶ್ವರ್ಯ, ಅಮ್ಮು, ಅಮೀರ್, ಲಕ್ಷ್ಮಿ ಪೂಜಾರಿ, ವಿಜಯಲಕ್ಷ್ಮಿ, ಶಂಕ್ರಮ್ಮ, ವಿದ್ಯಾ, ಪವಿತ್ರ, ರೇಖಾ ಭಜಂತ್ರಿ, ದಾನಮ್ಮ, ಶೈಲಾ, ಆಯ್ಕೆಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.