ಸೋಲಾಪುರ:ಆಷಾಢ ಏಕಾದಶಿ ಪ್ರಯುಕ್ತ ಜೂನ್ 29ರಂದು ಪಂಢರಪುರ ವಿಠಲ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ರಾಜ್ಯದ ಭಾರಿ ಸಂಖ್ಯೆಯ ಭಕ್ತರೂ ಪಾಲ್ಗೊಳ್ಳಲಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ದಂಪತಿ ಶುಕ್ರವಾರ ನಡೆಯಲಿರುವ ವಿಶೇಷ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
ಸುಮಾರು 12 ಲಕ್ಷ ಭಕ್ತರು ಪಂಢರಪುರಕ್ಕೆ ಆಗಮಿಸಬಹುದು ಎಂದು ಅಂದಾಜಿಸಲಾಗಿದೆ. ರಾಜ್ಯದ ಹಲವು ನಗರಗಳಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಉಪವಾಸವಿದ್ದು, ವಿಠಲನ ನಾಮಸ್ಮರಣೆ ಮಾಡುತ್ತಾರೆ. ಹೀಗಾಗಿ ಅವರಿಗೆ ಅಲ್ಪೋಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಭಕ್ತರಿಗೆ ವಿಠಲನ ದರ್ಶನ ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ವಿಐಪಿ ದರ್ಶನ ಬಂದ್ ಮಾಡಲಾಗಿದೆ.
ನಿಪ್ಪಾಣಿ(ಬೆಳಗಾವಿ ಜಿಲ್ಲೆ) ವರದಿ: ಆಷಾಢ ಏಕಾದಶಿ ಸಂದರ್ಭದಲ್ಲೇ ‘ಬಕ್ರೀದ್’ ಆಚರಣೆ ಇರುವ ಹಿನ್ನೆಲೆಯಲ್ಲಿ ಕುರ್ಬಾನಿ (ಪ್ರಾಣಿಬಲಿ) ನೀಡುವುದನ್ನು ಮುಸ್ಲಿಮರು ಒಂದು ದಿನ ಮುಂದೂಡಿದ್ದಾರೆ.
ನಿಪ್ಪಾಣಿಯ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ‘ಆಷಾಢ ಏಕಾದಶಿ’ ಪೂಜೆ ನಡೆಯಲಿದ್ದು, ರಾಜ್ಯ ಹಾಗೂ ಹೊರರಾಜ್ಯದಿಂದ ಅಪಾರ ಸಂಖ್ಯೆ ಭಕ್ತರು ಬರುತ್ತಾರೆ. ಅಂದೇ ಬಕ್ರೀದ್ ಇದ್ದು, ಕುರ್ಬಾನಿ ನೀಡುವುದನ್ನು ಒಂದು ದಿನ ಮುಂದೂಡುವಂತೆ ವಿಠಲ ಮಂದಿರದ ಟ್ರಸ್ಟಿಗಳು ಕೋರಿದ್ದರು.
ಇದಕ್ಕೆ ಮುಸ್ಲಿಮರು ಒಪ್ಪಿಗೆ ಸೂಚಿಸಿದ್ದು, ಹಬ್ಬದ ದಿನದಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಮಾರನೇ ದಿನ ಕುರ್ಬಾನಿ ನೀಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.