ಇಂಡಿ: ಕರ್ನಾಟಕ ವಿದ್ಯುತ್ ಪ್ರಸಾರ ನಿಗಮದಿಂದ ತಾಲ್ಲೂಕಿನ ನಾಲ್ಕು ಕಡೆ 110 ಕೆ.ವಿ ಉಪಕೇಂದ್ರಗಳಿಗೆ ಮಂಜೂರಾತಿ ದೊರೆತಿದೆ ಎಂದು ಕಾರ್ಯ ನಿರ್ವಾಹಕ ಎಂಜಿನಿಯರ್ ಎಸ್.ಎ. ಬಿರಾದಾರ ಮತ್ತು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎಸ್.ಆರ್.ಮೆಡೆಗಾರ ತಿಳಿಸಿದ್ದಾರೆ.
ಅವರು ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿರಗೂರ ಇನಾಂ, ತಾಂಬಾ, ಹಡಲಸಂಗ ಮತ್ತು ಅಗಸನಾಳ ಗ್ರಾಮಗಳಲ್ಲಿ ಹೊಸದಾಗಿ ಮಂಜುರಾತಿ ಆಗಿವೆ. ನಿಂಬಾಳ ಗ್ರಾಮದಲ್ಲಿ 110 ಕೆ.ವಿ ಉಪಕೇಂದ್ರ ಪ್ರಗತಿ ಹಂತದಲ್ಲಿದೆ. ವಿದ್ಯುತ್ ಕೇಂದ್ರ ಸ್ಥಾಪನೆಗೆ ಖಾಸಗಿಯವರಿಂದ ಜಾಗ ಪಡೆಯಲಾಗಿದೆ. ತಾಂತ್ರಿಕ ತಂಡದಿಂದ ಜಾಗ ಪರಿಶೀಲನೆ ಮಾತ್ರ ಬಾಕಿ ಇದೆ. ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಹಂತ ಹಂತವಾಗಿ ಕಾಮಗಾರಿ ಆರಂಭಿಸಲು ಗಮನ ಹರಿಸಲಾಗುವುದು ಎಂದರು.
ಈಗಾಗಲೇ ಇಂಡಿ ಪಟ್ಟಣದಲ್ಲಿ ಎರಡು, ಹಿರೇಬೇವನೂರ, ಲಚ್ಯಾಣ, ಅಥರ್ಗಾ, ತಡವಲಗಾ, ನಾದ ಕೆಡಿ, ತಾಂಬಾ , ಝಳಕಿ, ಹೊರ್ತಿ, ರೋಡಗಿ, ಮಸಳಿ, ನಿಂಬಾಳ, ಸಾತಲಗಾಂವ ಕ್ರಾಸ್, ಬೈರುಣಗಿ 110 ಕೆ.ವಿ ಕೇಂದ್ರಗಳು ಈಗಾಗಲೇ ಚಾಲ್ತಿಯಲ್ಲಿವೆ. ರಾಜ್ಯದಲ್ಲಿಯೇ ವಿಜಯಪುರಕ್ಕೆ ಹೆಚ್ಚು ವಿದ್ಯುತ್ ಕೇಂದ್ರಗಳು ಮಂಜೂರಾಗಿದ್ದು, ಅದರಲ್ಲಿ ಇಂಡಿ ತಾಲ್ಲೂಕು ರಾಜ್ಯದಲ್ಲಿಯೇ ಅತೀ ಹೆಚ್ಚು ವಿದ್ಯುತ್ ಉಪಕೇಂದ್ರ ಮಂಜೂರಾತಿ ಪಡೆದು ಪ್ರಥಮ ಸ್ಥಾನದಲ್ಲಿದೆ ಎಂದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮತ್ತು ಕರ್ನಾಟಕ ವಿದ್ಯುತ್ ಪ್ರಸಾರ ನಿಗಮ ಇವರ ಪ್ರಯತ್ನದಿಂದ ಇಂಡಿ ತಾಲ್ಲೂಕಿಗೆ ಇದೀಗ ನಾಲ್ಕು ಉಪಕೇಂದ್ರಗಳು ಮಂಜೂರಾಗಿವೆ ಎಂದರು. ಈ ಕಾರ್ಯದಲ್ಲಿ ಸಹಕರಿಸಿದ ಕೆಪಿಟಿಸಿಎಲ್ ಅಧಿಕಾರಿಗಳು ಹಾಗೂ ತಂಡದವರು ಮತ್ತು ಇಂಡಿಯ ಸಿಬ್ಬಂದಿಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕೆಲವೆಡೆ 33/11 ಕೆ.ವಿ ಮತ್ತೆ ಕೆಲವೆಡೆ 66/11 ಕೆ.ವಿ ಕೇಂದ್ರ ಸ್ಥಾಪನೆಗೆ ಉದ್ದೇಶೀಸಲಾಗಿದೆ. ಉಪಕೇಂದ್ರ ಸ್ಥಾಪನೆಯಿಂದ ವೋಲ್ಟೇಜ್ ಸಮಸ್ಯೆ, ವಿದ್ಯುತ್ ಅಡಚಣೆ ಮೊದಲಾದ ತೊಡಕುಗಳು ಪರಿಹಾರವಾಗಲಿವೆ. ಮುಂದಿನ ದಿನಗಳಲ್ಲಿ ಕೃಷಿ, ತೋಟಗಾರಿಕೆ, ಕೈಗಾರಿಕೆ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.