ವಿಜಯಪುರ: ‘ಮುಂದುವರೆದ ಹಾಗೂ ಸಮಾಜದಲ್ಲಿ ಮೇಲಕ್ಕೇರಿದ ಮಹಿಳೆಯರು ದುರ್ಬಲ ಹಾಗೂ ಅವಕಾಶ ವಂಚಿತ ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಮುಂದೆ ಬರಬೇಕು’ ಎಂದು ಹೈದರಾಬಾದ್ನ ಮೌಲಾನಾ ಅಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಶಬಾನಾ ಕೇಸರ ಸೂರಿ ಹೇಳಿದರು.
ನಗರದ ಸಿಕ್ಯಾಬ್ ಸಂಸ್ಥೆಯ ಎ.ಆರ್.ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಇಂದಿನ ಸನ್ನಿವೇಶದಲ್ಲಿ ಮಹಿಳೆಯರು ಪುರುಷರು ಜೊತೆ ಸ್ಪರ್ಧೆ ಮಾಡುವ ಪರಿಸ್ಥಿತಿ ಇಲ್ಲ, ಅವರ ಸ್ಪರ್ಧೆ ತಮ್ಮ ತಮ್ಮಲ್ಲಿ ಇದ್ದು ದೃಢನಿರ್ಧಾರದಿಂದ ಮುನ್ನಡೆಯಬೇಕಾಗಿದೆ’ ಎಂದರು.
ಕರ್ನಾಟಕದಲ್ಲಿ ಮಹಿಳೆಯರ ಅಭಿವೃದ್ಧಿ ಮಟ್ಟವು ಇತರ ರಾಜ್ಯಗಳಿಗಿಂತ ತೃಪಿಕರವಾಗಿದೆ ಎಂದರು.
ಲಂಡನ್ನ ಮಿದುಳು ರಕ್ತನಾಳ ತಜ್ಞರಾದ ಡಾ.ಶುಜಾ ಪುಣೇಕರ ಮಾತನಾಡಿ, ‘ಪ್ರತಿ ಪುರುಷರಲ್ಲಿ ಅವನ ತಾಯಿಯ ಪ್ರತಿರೂಪ ಇರುತ್ತದೆ. ಸ್ತ್ರೀ-ಪುರುಷರು ಪ್ರಕೃತಿಯ ಎರಡು ಅವಿಭಾಜ್ಯ ಅಂಗಗಳಾಗಿದ್ದು, ಸಮತೋಲನ ಬದುಕು ಅವಶ್ಯ’ ಎಂದು ಹೇಳಿದರು.
ಕಾಲೇಜು ಆಡಳಿತ ಮಂಡಳಿಯ ಚೇರ್ಮನ್ ರಿಯಾಜ್ ಫಾರೂಖಿ ಮಾತನಾಡಿ, ‘ಮಾನವೀಯತೆಯ ಸೇವೆ ಎಂದರೆ ನಿಸ್ವಾರ್ಥ ಸೇವೆ. ಈ ಗುಣ ಮಹಿಳೆಯದಲ್ಲಿ ಜನ್ಮತಃ ಬಂದಿರುತ್ತದೆ. ತಾಂತ್ರಿಕತೆ ಸುಧಾರಣೆಗಳು ನಮ್ಮನ್ನು ಪರಸ್ಪರ ಒಗ್ಗೂಡಿಸಬೇಕೆ ವಿನಃ ಅವು ನಮ್ಮನ್ನು ಒಡೆಯಬಾರದು’ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಕೆ ಯಡಹಳ್ಳಿ, ಡಾ. ಹಾಜಿರಾ ಪರವೀನ, ಡಾ. ಮಲ್ಲಿಕಾರ್ಜುನ, ಆಸ್ಮಾ ನಾಗರದಿನ್ನಿ, ಪ್ರೊ.ವಿದ್ಯಾವತಿ ಬೆನ್ನೂರ, ಮಿನಾಜ ಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.