ವಿಜಯಪುರ: ಕೋವಿಡ್ ಎರಡನೇ ಅಲೆಯು ಈಗಾಗಲೇ ತನ್ನ ತೀವ್ರತೆಯನ್ನು ತೋರಿದ್ದು, ಜನಸಾಮಾನ್ಯರು ತೀವ್ರ ಆತಂಕದಲ್ಲಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲ್ಗೌಡ ಪಾಟೀಲ್ ಹೇಳಿದ್ದಾರೆ.
ಕೋವಿಡ್ ಮೊದಲನೇ ಹಂತದಲ್ಲಿ ನಾವು ಕಲಿಯದ ಪಾಠಗಳನ್ನು ಎರಡನೇ ಅಲೆ ಸಂದರ್ಭದಲ್ಲಿ ಕಲಿಯಬೇಕಾಗಿತ್ತು. ಆದರೆ, ನಾವು ನಮ್ಮ ನಿರ್ಲಕ್ಷದಿಂದ ಈ ಬಾರಿಯೂ ಮಾಸ್ಕ್ ಧರಿಸದಿರುವುದು, ಸ್ಯಾನಿಟೈಸರ್ ಬಳಸದಿರುವುದು ಮತ್ತು ಪರಸ್ಪರ ಅಂತರ ಕಾಪಾಡದೆ ಸಂತೆ, ಮದುವೆ, ಗುಂಪು ಗೂಡುವಿಕೆ ಇತ್ಯಾದಿಗಳನ್ನು ಮುಂದುವರೆಸಿದ್ದರಿಂದ ಅದರ ಬೆಲೆಯನ್ನು ಈಗ ತೆರಬೇಕಾಗಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಕೊರೊನಾ ರೋಗಿಗಳ ಸಂಖ್ಯೆಯಿಂದ ಬೆಡ್ಗಳು ದೊರಕುತ್ತಿಲ್ಲ. ರೋಗಿಗಳಿಗೆ ಆಕ್ಸಿಜನ್ ಪೂರೈಸಲು ಸಾಧ್ಯವಾಗುತ್ತಿಲ್ಲ, ರೆಮಿಡಿಶಿವಿರ್ ಇಂಜೆಕ್ಷನ್ ಲಭ್ಯವಿಲ್ಲ. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲರೂ ಹರಸಾಹಸಪಡುತ್ತಿದ್ದು ಭಗವಂತನೇ ನಮ್ಮನ್ನು ಕಾಪಾಡಬೇಕೇ ಹೊರತು ಸರ್ಕಾರವಲ್ಲ ಎಂದಿದ್ದಾರೆ.
ಮುಂದಿನವಾರ ಪರಿಸ್ಥಿತಿ ಇನ್ನೂ ಹೆಚ್ಚು ಉಲ್ಬಣವಾಗುವ ಲಕ್ಷಣಗಳಿದ್ದು ಕಾರಣ ದಯವಿಟ್ಟು ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅನಿವಾರ್ಯವಾದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.