ಕೊಲಾರ: ಪಟ್ಟಣದ ತೋಟಗಾರಿಕಾ ರೈತರ ಉತ್ಪಾದಕರ ಕಂಪನಿ, ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕಿನ 50ಕ್ಕೂ ಹೆಚ್ಚು ರೈತ ಮುಖಂಡರು ವೈಜ್ಞಾನಿಕ ಕೃಷಿ ಅಧ್ಯಯನಕ್ಕಾಗಿ ಐದು ದಿನ ಮಹಾರಾಷ್ಟ್ರ ಪ್ರವಾಸಕ್ಕೆ ಕೈಗೊಂಡರು.
ಪಟ್ಟಣದ ತೋಟಗಾರಿಕಾ ರೈತರ ಉತ್ಪಾದಕರ ಕಂಪನಿ ಮುಂಭಾಗದಲ್ಲಿ ಸೋಮವಾರ ಕಲ್ಲಿನಾಥ ಶ್ರೀ ಸಮ್ಮುಖದಲ್ಲಿ ಬಸ್ಗೆ ಪೂಜೆ ಸಲ್ಲಿಸುವ ಮೂಲಕ ರೈತರನ್ನು ಬೀಳ್ಕೊಡಲಾಯಿತು.
ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ನಗರದಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರ, ಪುಣೆಯ ಮಹಾತ್ಮ ಫುಲೆ ವಸ್ತುಸಂಗ್ರಹಾಲಯ ಹಾಗೂ ವಿದ್ಯಾಪೀಠದ ಕೃಷಿ ವಿಶ್ವ ವಿದ್ಯಾಲಯ, ಜಲಗಾಂವ್ನ ಸಸ್ಯ ಮತ್ತು ತುಂತುರು ಹನಿ ನೀರಾವರಿ ಘಟಕ, ನಾಗಪುರದ ರಾಷ್ಟ್ರೀಯ ಸಂಶೋಧನಾ ನಿಂಬೆ ಕೇಂದ್ರ, ರಾಹುರಿ ನೀರಾವರಿ ಕ್ಷೇತ್ರ, ಫಂಡರಾಪುರ, ಭಾರಾಮತಿ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಹಾಗೂ ಮಾರಾಟಕ್ಕೆ ಸಂಬಂಧಿಸಿದ ಅಧ್ಯಯನ ನಡೆಸಲಿದ್ದಾರೆ.
‘ಸಂಸ್ಥೆಯಲ್ಲಿ ಒಟ್ಟು 1 ಸಾವಿರ ರೈತ ಸದಸ್ಯರಿದ್ದು, 20 ರೈತ ಸದಸ್ಯರ ಒಂದು ತಂಡದಂತೆ ಒಟ್ಟು 50 ತಂಡಗಳನ್ನು ರಚಿಸಲಾಗಿದೆ. ಒಂದೊಂದು ತಂಡಕ್ಕೆ ಒಬ್ಬೊಬ್ಬ ರೈತ ಮುಖ್ಯಸ್ಥರನ್ನು ನೇಮಿಸಿ 50 ತಂಡಗಳ 50 ಮುಖ್ಯಸ್ಥರನ್ನು ಪ್ರವಾಸಕ್ಕೆ ಕಳುಹಿಸಲಾಗಿದೆ. ಅವರು ಪ್ರವಾಸದಿಂದ ಮರಳಿದ ನಂತರ ತಮ್ಮ ತಂಡದ ರೈತ ಸದಸ್ಯರಿಗೆ ಅಧ್ಯಯನದಲ್ಲಿ ಪಡೆದ ಸಂಪೂರ್ಣ ಮಾಹಿತಿ ನೀಡುತ್ತಾರೆ’ ಎಂದು ಸಂಸ್ಥೆಯ ಮುಖ್ಯಸ್ಥ ಹಾಗೂ ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.