ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಹಿಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ ‘ಲಿಂಗತ್ವ ಗ್ರಹಿಕೆ ವಿವಿಧ ಆಯಾಮಗಳುʼ ಪುಸ್ತಕವನ್ನು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಪ್ರೊ. ಶುಭಾ ಮರವಂತೆ ಬಿಡುಗಡೆಗೊಳಿಸಿದರು.
ವಿಜಯಪುರ: ಸ್ತ್ರೀವಾದವು ಮಹಿಳೆಯರನ್ನು ಸೃಜನಶೀಲರಾಗಿರಲು ಪ್ರೇರೇಪಿಸುವುದಲ್ಲದೆ, ನಮ್ಮೊಳಗಿನ ಸಮಾನತೆಯ ಅರಿವನ್ನು ಎಚ್ಚರಿಸುತ್ತದೆ. ಇದು ಹಕ್ಕುಗಳಿಗಾಗಿ ಹೋರಾಟವಲ್ಲ, ಬದಲಾಗಿ ಮಾನವೀಯ ಮೌಲ್ಯಗಳ ಪ್ರತಿಪಾದನೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಪ್ರೊ. ಶುಭಾ ಮರವಂತೆ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಹಿಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ ‘ಲಿಂಗತ್ವ ಗ್ರಹಿಕೆ ವಿವಿಧ ಆಯಾಮಗಳಲ್ಲಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ತ್ರೀವಾದವನ್ನು ಪ್ರತಿಯೊಬ್ಬರೂ ಸರಿಯಾಗಿ ಅರ್ಥಮಾಡಿಕೊಳ್ಳುವುದು ಈಗಿನ ಕಾಲದಲ್ಲಿ ಅಗತ್ಯವಾಗಿದೆ ಎಂದರು.
ಹೆಣ್ಣು–ಗಂಡು ಸಹಜೀವಿಗಳಾಗಿ, ಪರಸ್ಪರ ಪೂರಕವಾಗಿ ಬದುಕಿದಾಗ ಮಾತ್ರ ಸಮತೋಲನದ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಸಮಾಜದಲ್ಲಿ ಯಾರು ಶ್ರೇಷ್ಠರು ಅಥವಾ ಕನಿಷ್ಠರು ಎಂಬ ಭಾವನೆಗೆ ಸ್ಥಳವಿಲ್ಲ, ಪ್ರತಿಯೊಬ್ಬರೂ ತಮ್ಮದೇ ಆದ ಶಕ್ತಿ ಮತ್ತು ಸಾಮರ್ಥ್ಯ ಹೊಂದಿದ್ದಾರೆ. ಮಹಿಳೆ ಮತ್ತು ಪುರುಷರು ಸಮಾನವಾಗಿ ಬೆಳೆದುಬರಬೇಕಾದ ಕಾಲ ಇದು. ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಹಿಳಾ ಅಧ್ಯಯನ ಕೇವಲ ಅಧ್ಯಯನವಲ್ಲ, ಅದು ಸಮಾನತೆ, ಸಬಲೀಕರಣ ಮತ್ತು ಸಮಾಜಮುಖಿ ಚಿಂತನೆಗಳ ದಿಕ್ಸೂಚಿಯಾಗಬೇಕಿದೆ ಎಂದರು.
ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಮಾತನಾಡಿ, ಇಂದಿನ ಯುವಜನತೆ, ವಿಶೇಷವಾಗಿ ವಿದ್ಯಾರ್ಥಿನಿಯರು, ಕೇವಲ ಜ್ಞಾನವನ್ನು ಪಡೆದುಕೊಳ್ಳುವಷ್ಟರಲ್ಲಿ ನಿಲ್ಲದೇ, ಸಮಾಜದಲ್ಲಿ ಸಮಾನತೆಯ ಧ್ವಜದಾರರಾಗಬೇಕು. ಇಂತಹ ನಿಲುವುಗಳು ತಾನಾಗಿಯೇ ಬರುವುದಿಲ್ಲ ಅವುಗಳನ್ನು ಬೆಳಸಬೇಕಾಗುತ್ತದೆ ಎಂದು ಹೇಳಿದರು.
ಡಾ. ಕಲಾವತಿ ಕಾಂಬಳೆ, ಡಾ. ಸರೋಜಾ ಸಂತಿ, ಡಾ.ರಜಿಯಾ ನದಾಫ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಲಕ್ಷ್ಮೀದೇವಿ ವೈ., ಡಾ.ಶಶಿಕಲಾ ರಾಠೋಡ, ಡಾ. ಭಾಗ್ಯಶ್ರೀ ದೊಡಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.