ನಾಲತವಾಡ: ‘ಮಂದಿರವಾದರೂ ಆಗಲಿ ಅಥವಾ ಮಸೀದಿಯಾದರೂ ಆಗಲಿ, ದೇವರು ಒಬ್ಬನೇ’ ಎಂದು ಬಾಲೆಹೊಸೂರ ಶಿರಹಟ್ಟಿ ಭಾವೈಕ್ಯ ಪೀಠದ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿಗೆ ಸಮೀಪದ ಆಲೂರ ಗ್ರಾಮದಲ್ಲಿ ಜರುಗಿದ ನಿತ್ಯ ಗ್ರಾಮದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇವರು ಒಬ್ಬನೇ. ಅವನು ಎಲ್ಲೆಡೆಯೂ ಇದ್ದಾನೆ. ಆತ್ಮಶುದ್ಧಿಯಿಂದ ದೇವರಿಗೆ ಪೂಜೆ ಮಾಡಿದರೆ ದೇವರು ಒಳ್ಳೆಯದನ್ನು ಮಾಡುತ್ತಾನೆ. ಧರ್ಮ ಎಂದರೆ ಬೇರೆಯವರಿಗೆ ಕೆಟ್ಟದ್ದನ್ನು ಮಾಡದೆ, ಎಲ್ಲರಿಗೂ ಒಳ್ಳೇಯದನ್ನೇ ಬಯಸುವುದು. ವೈರಿಗೂ ಒಳ್ಳೆಯದಾಗಲಿ ಎಂದು ಬಯಸುವುದು ಮಾನವ ಧರ್ಮ’ ಎಂದರು.
ಲೊಟಗೇರಿ ದೇವಿ ಮಠದ ಸಾಧಕ ಗುರುಮೂರ್ತಿದೇವರು ಕಣಕಾಲಮಠ ಮಾತನಾಡಿ, ‘ಸದಾ ಉತ್ತಮ ಕೆಲಸ ಮಾಡುವವರಿಗೂ ಕೆಲವೊಮ್ಮೆ ಕೆಡಕುಂಟಾಗಿವೆ. ಪ್ರತಿಯೊಬ್ಬರ ಜೀವನದಲ್ಲೂ ಒಳಿತು, ಕೆಡುಕು ಒಂದರ ನಂತರ ಮತ್ತೊಂದು ಸಂಭವಿಸುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಸುಖ ಮತ್ತು ದುಃಖ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು’ ಎಂದರು.
ಕೊಡೇಕಲ್ ದುರದುಂಡೇಶ್ವರ ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಲೊಟಗೇರಿಯ ಗುರುಮೂರ್ತಿ ಕಣಕಾಲಮಠ, ಬೀಳಗಿಯ ಸಂಗನಬಸವ ದೇವರು, ನವಲಗುಂದದ ವೀರಬಸವ ದೇವರು, ಆಲೂರ ಕೇಸಾಪೂರ ಗ್ರಾಮದ ಗುರುಹಿರಿಯರು, ಯುವಕರು, ವಿವಿಧ ಸಂಘಟನೆಗಳ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.