ವಿಜಯಪುರ: ಇಲ್ಲಿಯ ಐತಿಹಾಸಿಕ ಸ್ಮಾರಕ ಗೋಳಗುಮ್ಮಟದ ಆವರಣದಲ್ಲಿ ಬೆಳಗಿನ ಜಾವ ವಾಯುವಿಹಾರ ಮಾಡಬೇಕಾದರೆ ಇನ್ನು ಮುಂದೆ ಕಡ್ಡಾಯವಾಗಿ ಪೊಲೀಸ್ ಪ್ರಮಾಣಪತ್ರವನ್ನು ಸಲ್ಲಿಸಬೇಕು!
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ)ಯು ಜೂನ್ 4ರಂದು ಇಂತಹದ್ದೊಂದು ಆದೇಶ ಹೊರಡಿಸಿದೆ.
ಜೂನ್ 1ರಿಂದಲೇ ಪೂರ್ವಾನ್ವಯವಾಗುವಂತೆ ಪೊಲೀಸ್ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಈ ಮೊದಲು ವಾಯುವಿಹಾರಿಗಳು ವಾರ್ಷಿಕ ₹35 ಪಾವತಿಸಿ ಪಾಸ್ ಪಡೆದುಕೊಳ್ಳುತ್ತಿದ್ದರು. ಯಾವುದೇ ದಾಖಲಾತಿಗಳನ್ನು ಸಲ್ಲಿಸಬೇಕಾಗಿರಲಿಲ್ಲ. ಆದರೆ, ಈಗ ಪೊಲೀಸ್ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯವಾಗಿದೆ. ಅಲ್ಲದೆ ವಾಯುವಿಹಾರ ಶುಲ್ಕವನ್ನು ವಾರ್ಷಿಕ ₹3,600ಕ್ಕೆ ಏರಿಕೆ ಮಾಡಲಾಗಿದೆ.
‘ಭಾರತೀಯ ಪುರಾತತ್ವ ಇಲಾಖೆಯು ದೇಶದಲ್ಲಿರುವ ಎಲ್ಲಾ ಸ್ಮಾರಕಗಳಲ್ಲಿ ವಾಯುವಿಹಾರ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ. ಇದು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಸರ್ಕಾರದ ಆದೇಶವನ್ನು ನಾವು ಪಾಲಿಸಬೇಕಾಗುತ್ತದೆ’ ಎಂದು ಗೋಳಗುಮ್ಮಟದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಮೌನೇಶ ಕುರುವತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಮೊದಲು ಈ ವ್ಯವಸ್ಥೆ ಇರಲಿಲ್ಲ. ನಾವೇ ಪಾಸ್ ಕೊಡುತ್ತಿದ್ದೆವು. ಆದರೆ, ಈಗ ಅರ್ಜಿ ನಮೂನೆ, ಎರಡು ಭಾವಚಿತ್ರ, ಪೊಲೀಸ್ ಪ್ರಮಾಣ ಪತ್ರವನ್ನು ಧಾರವಡದ ವಲಯ ಕಚೇರಿಗೆ ಕಳುಹಿಸಿ ಕೊಡುತ್ತೇವೆ. ಅವರೇ ಪಾಸ್ಗಳನ್ನು ನೀಡುತ್ತಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.