ತಾಳಿಕೋಟೆ: ಪಟ್ಟಣದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ನ್ಯಾಯಾಲಯ ಆರಂಭಕ್ಕೆ ಕೊನೆಗೂ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ.
ತಾಳಿಕೋಟೆ ತಾಲ್ಲೂಕಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಾರದಲ್ಲಿ ಮೂರು ದಿನ ಅಂದರೆ, ಪ್ರತಿ ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ಕಲಾಪ ನಡೆಸುವಂತೆ ಮುದ್ದೇಬಿಹಾಳ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದ ಅಧೀಕ್ಷಕರಿಗೆ ಸೂಚಿಸಿದೆ.
ತಾಳಿಕೋಟೆ ತಾಲ್ಲೂಕಿನ ಸುಮಾರು 2,500 ಮೊಕದ್ದಮೆಗಳು ಮುದ್ದೇಬಿಹಾಳ ಕೋರ್ಟ್ನಲ್ಲಿ ನಡೆಯುತ್ತಿದ್ದು, ಸುಮಾರು 30 ರಿಂದ 50 ಕಿ.ಮೀ ದೂರದ ಗ್ರಾಮಗಳಿಂದ ಜನರು ಅಲೆದಾಡುವ ಶ್ರಮ, ಸಮಯ, ಹಣ ಇದರಿಂದ ಉಳಿತಾಯವಾಗಲಿದೆ. ಪಟ್ಟಣದ ಹಳೆಯ ಪುರಸಭೆಯ ಆವರಣದಲ್ಲಿನ ಕಟ್ಟಡವೊಂದನ್ನು ಕೋರ್ಟ್ ಕಲಾಪ ಪ್ರಾರಂಭಿಸಲು ಪುರಸಭೆ ವ್ಯವಸ್ಥೆ ಮಾಡಿತ್ತು. ಆದರೆ, ಸ್ಥಳಾವಕಾಶ ಕೊರತೆಯಾಗುತ್ತದೆಂದು ಪ್ರಾರಂಭವಾಗುವ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಇದೀಗ ಕೋರ್ಟ್ ಕಲಾಪ ಪ್ರಾರಂಭಿಸುವ ನಿರ್ದೇಶನ ಬಂದಿರುವುದರಿಂದ ತಾಲ್ಲೂಕಿನ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಮುದ್ದೇಬಿಹಾಳದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ಗರಗ, ಮುದ್ದೇಬಿಹಾಳ ಸಿವಿಲ್ ನ್ಯಾಯಾಧೀಶ ಸಂಪತ್ ಕುಮಾರ ಬಳೂಳಗಿಡದ ಹಾಗೂ ಮುದ್ದೇಬಿಹಾಳ ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅವರನ್ನು ಮುದ್ದೇಬಿಹಾಳ - ತಾಳಿಕೋಟೆ ವಕೀಲರು ಹಾಗೂ ತಾಳಿಕೋಟೆ ಪಟ್ಟಣದ ಪ್ರಮುಖರು ಗುರುವಾರ ಗೌರವಿಸಿದರು.
ವಕೀಲರಾದ ಎಂ.ಎಚ್.ಹಾಲಣ್ಣವರ, ವಿ.ಜಿ.ಮದರಕಲ್ಲ, ಬಿ.ಎಂ.ಮುಂದಿನಮನಿ ಎಸ್.ಬಿ.ನಾರಿ, ಎಂ.ಎಸ್.ಅಮಲ್ಯಾಳ, ಎಂ.ಆರ್.ಪಾಟೀಲ ಲಕ್ಕುಂಡಿ, ಆರ್.ಎಚ್.ಇನಾಮದಾರ, ಎಸ್.ಆರ್. ಸಜ್ಜನ ಬೋಳವಾಡ, ಕಾರ್ತಿಕ ಕಟ್ಟಿಮನಿ ಪ್ರಭಾಕರ ಗುಡುಗುಂಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.