ADVERTISEMENT

ಗ್ಯಾರಂಟಿ ಯೋಜನೆ: ₹3,100 ಕೋಟಿ ವೆಚ್ಚ: ಇಲಿಯಾಸ್ ಬೋರಾಮಣಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಇಲಿಯಾಸ್ ಬೋರಾಮಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 13:36 IST
Last Updated 26 ಜೂನ್ 2025, 13:36 IST
ಸಿಂದಗಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ್ ಬೋರಾಮಣಿ ಮಾತನಾಡಿದರು 
ಸಿಂದಗಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ್ ಬೋರಾಮಣಿ ಮಾತನಾಡಿದರು    

ಸಿಂದಗಿ: ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ವಿಜಯಪುರ ಜಿಲ್ಲೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದೆ ಜಿಲ್ಲೆಯಲ್ಲಿ ಈ ಯೋಜನೆಗಾಗಿ ₹3,100 ಕೋಟಿ ಖರ್ಚು ಮಾಡಲಾಗಿದೆ. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆ ತಿಕೋಟ, ತಾಳಿಕೋಟೆ ಹಾಗೂ ಸಿಂದಗಿ ತಾಲ್ಲೂಕುಗಳಲ್ಲಿ ಶೇ 100ರಷ್ಟು ಯಶಸ್ವಿಯಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಇಲಿಯಾಸ್ ಬೋರಾಮಣಿ ಹೇಳಿದರು.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಇಡೀ ದೇಶದಲ್ಲಿಯೇ ಗ್ಯಾರಂಟಿ ಯೋಜನೆ ಯಶಸ್ವಿಯಾಗಿದ್ದು ಕರ್ನಾಟಕದಲ್ಲಿ. ಯೋಜನೆಯ ಸಾಧನೆ ಅಗಾಧ. ಆದರೆ ಪ್ರಚಾರದಿಂದ ಹಿಂದೆ ಬಿದ್ದಿದೆ. ಪ್ರಚಾರಕ್ಕಾಗಿ ಇಡೀ ರಾಜ್ಯ ಒಳಗೊಂಡು ಕೇವಲ ₹15 ಲಕ್ಷ ಮಾತ್ರ ನೀಡಿದ್ದಾರೆ’ ಎಂದರು.  

‘ಆಹಾರ ಇಲಾಖೆ ಮಾತ್ರ ಸಾಧನೆಯಲ್ಲಿ ಹಿಂದುಳಿದಿದೆ. ಅದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳೂ ಕಾರಣ. ಆದರೆ ಅಧಿಕಾರಿಗಳು ಶ್ರಮಿಸಬೇಕಾಗಿದೆ. ಆಹಾರ ಇಲಾಖೆಯಲ್ಲಿ ಅಕ್ಕಿ ಮಾಫಿಯಾ, ಮರುಳು ಮಾಫಿಯಾ ಮೀರಿಸಿದೆ. ಇಂಡಿ-ಸಿಂದಗಿ ತಾಲ್ಲೂಕುಗಳಲ್ಲಿ ಬಡವರ ಅನ್ನ ಮಹಾರಾಷ್ಟ್ರಕ್ಕೆ ಕಳ್ಳ ಸಾಗಾಣಿಕೆಯಾಗುತ್ತಿದೆ. ಇಂಡಿ ತಾಲ್ಲೂಕಿನಲ್ಲಿ ಅಕ್ಕಿ ಮಾಫಿಯಾಗೆ ಸಂಬಂಧಿಸಿದಂತೆ 33 ಪ್ರಕರಣಗಳನ್ನು ದಾಖಲಿಸಿರುವೆ. ಹೀಗಾಗಿ ಅಕ್ಕಿ ಅಕ್ರಮ ಮಾರಾಟಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಲು ಮುಂದಾಗಬೇಕು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

74 ನ್ಯಾಯಬೆಲೆ ಅಂಗಡಿಗಳಲ್ಲಿ ಬಹುತೇಕ ಕಡೆ ಆಹಾರಧಾನ್ಯ ಪಡೆಯಲು ಚೀಟಿ ಕೊಡುವ ಪದ್ಧತಿ ಇದೆ. ಬನ್ನೆಟ್ಟಿ ಪಿ.ಎ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ₹10 ರೂಪಾಯಿ ಹೆಚ್ಚುವರಿ ತೆಗೆದುಕೊಂಡು ಚೀಟಿ ನೀಡಲಾಗುತ್ತಿದೆ ಎಂದು ಸಮಿತಿ ಸದಸ್ಯ ಎಸ್.ಬಿ.ಖಾನಾಪೂರ ವಕೀಲ ಆರೋಪಿಸಿದರು.

ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕುರಿತು ಸಾರಿಗೆ ಸಂಸ್ಥೆಯ ಕೆಲವು ಚಾಲಕರು, ನಿರ್ವಾಹಕರು ಸರ್ಕಾರವನ್ನು ಹಿಯ್ಯಾಳಿಸುವ ರೀತಿಯಲ್ಲಿ ಬಹಿರಂಗವಾಗಿ ಟೀಕಿಸುತ್ತಾರೆ ಎಂದು ಸದಸ್ಯ ಶಿದ್ಲಿಂಗ ಗುಂಡಾಪೂರ ಗಂಭೀರ ಆರೋಪಿಸಿದರು.

ಸಮಿತಿ ಸದಸ್ಯರಾದ ಮಹಮ್ಮದರಜತ ತಾಂಬೆ, ಸುನಂದಾ ಯಂಪೂರೆ, ರವಿಂದ್ರಬಾಬು ನಾಟೀಕಾರ, ಸಾಹೇಬಪಟೇಲ, ಪರುಶರಾಮ ಗೌಂಡಿ, ರುದ್ರಗೌಡ ಪಾಟೀಲ ಪಾಲ್ಗೊಂಡಿದ್ದರು.

ಎಇಇ ಚಂದ್ರಕಾಂತ ನಾಯಕ, ವಿದ್ಯಾ ಹಿಪ್ಪರಗಿ, ಸೋಮಶೇಖರ ಆಲಮೇಲ, ಸಾರಿಗೆ ಸಂಸ್ಥೆಯ ನಾಗಾವಿ ಇಲಾಖೆಗಳ ಪ್ರಗತಿ ಕುರಿತು ಮಾಹಿತಿ ನೀಡಿದರು. ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಶೈಲ ಕವಲಗಿ, ತಾಲ್ಲೂಕು ಪಂಚಾಯಿತಿ ಇಒ ರಾಮು ಅಗ್ನಿ ಇದ್ದರು.

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಸಿಂದಗಿ ತಾಲ್ಲೂಕಿನಲ್ಲಿ ಶೇ 100ರಷ್ಟು ಸಾಧನೆ ಮಾಡಿದೆ. 20 ಕಂತುಗಳಲ್ಲಿ ₹129 ಕೋಟಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ
ಶಂಭುಲಿಂಗ ಹಿರೇಮಠ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.