ಬಸವಣ್ಣನವರ ವಚನದಂತೆ, ಶಿವಪಥವರಿವೊಡೆ ಗುರುಪಥವೇ ಮೊದಲು. ಇಂದು ಗುರುಪೂರ್ಣಿಮಾ - ಆಷಾಢ ಮಾಸದ ಹುಣ್ಣಿಮೆ. ಇಂದು ವೇದಗಳನ್ನು ಸಂಗ್ರಹಿಸಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಜಗತ್ತಿಗೆ ನೀಡಿದ ಮಾನವಕುಲದ ಮೂಲ ಗುರು ಬ್ರಹ್ಮರ್ಷಿ ವ್ಯಾಸರ ಜನ್ಮದಿನ. ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದ ದಿನ, ಬುದ್ಧ ತನ್ನ ಪ್ರಥಮ ಧರ್ಮೋಪದೇಶ ನೀಡಿದ ಶುಭದಿನ.
ಶ್ರೀ ರಾಮಕೃಷ್ಣ ಪರಮಹಂಸರು ಹೇಳುವಂತೆ ‘ನಿನ್ನ ಅಂತರಾತ್ಮವೇ ನಿಜವಾದ ಗುರು’ ಈ ವಿಶೇಷ ದಿನದಂದು ಆ ಗುರುವಿನ ಕೃಪೆಗೆ ಪಾತ್ರರಾಗಲೆಂದೆ ನಮ್ಮ ಆಧ್ಯಾತ್ಮಿಕ ಸಾಧನೆ - ಅಂತರಿಕ ಹೋರಾಟಗಳು ಎಲ್ಲವೂ ನೆಡೆಯುತ್ತಿರುವುದು. ಅವನ ನಿಜ ಸ್ವರೂಪವನ್ನು ಶಂಕರರು ತಮ್ಮ ‘ವಿವೇಕಚೂಡಾಮಣಿ’ಯಲ್ಲಿ ಹೀಗೆ ವಿವರಿಸಿದ್ದಾರೆ.
ಜಾತಿ -ನೀತಿ -ಕುಲ- ಗೋತ್ರ- ದೂರಗಂ
ನಾಮ -ರೂಪ -ಗುಣ -ದೋಷ ವರ್ಜಿತಂ|
ದೇಶ -ಕಾಲ- ವಿಷಯಾತಿವರ್ತಿ ಯದ್
ಬ್ರಹ್ಮ ತತ್ವಮಸಿ ಭಾವ ಯಾತ್ಮನಿ||
ನಾಮ, ರೂಪ, ಗುಣ, ದೋಷಗಳಿಂದ ಮುಕ್ತವಾಗಿರುವ, ಜಾತಿ, ನೀತಿ, ಕುಲ, ಗೋತ್ರಗಳಿಂದ ಹೊರತಾಗಿರುಬ, ದೇಶ, ಕಾಲಗಳಿಗೂ, ಇಂದ್ರಿಯಗಳಿಗೂ ಅತೀತವಾಗಿರುವ ‘ಅದು’ ನೀನೇ ಆಗಿರುವೆ. ಆ ‘ನಿನ್ನನ್ನು’ ಕುರಿತು ಧ್ಯಾನಿಸು. ಆ ‘ನೀನೇ’ ಗುರು. ಇದನ್ನೇ ರಾಷ್ಟ್ರಕವಿ ಕುವೆಂಪು ಅವರು ‘ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ’ ಎಂದು ವರ್ಣಿಸಿದ್ದಾರೆ.
ಅಂತರಾತ್ಮದ ಅಂತರವನ್ನು ನೀಗಿಸಿ ನಿರಂತರ ಸತ್ಯದರ್ಶನ ಮಾಡಿಸುವ ಗುರುವಿಗೆ ನಮನವೇ ಗುರುಪೂರ್ಣಿಮಾ. ವಂದೇ ಗುರುಪರಂಪರಂ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.