ADVERTISEMENT

ಆರೋಗ್ಯ ಸಮೀಕ್ಷೆ: ವಸ್ತುನಿಷ್ಠ ಮಾಹಿತಿ ನೀಡಿ

ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸಾರ್ವಜನಿಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 16:50 IST
Last Updated 4 ಜೂನ್ 2020, 16:50 IST
ವಿಜಯಪುರದ ಅಲ್ಲಾಪುರ ಬೇಸ್ ಕೋವಿಡ್‌ ಕಂಟೈನ್ಮೆಂಟ್‌ಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಇದ್ದರು
ವಿಜಯಪುರದ ಅಲ್ಲಾಪುರ ಬೇಸ್ ಕೋವಿಡ್‌ ಕಂಟೈನ್ಮೆಂಟ್‌ಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಇದ್ದರು   

ವಿಜಯಪುರ: ಜಿಲ್ಲೆಯ ಕಂಟೈನ್ಮೆಂಟ್ ವಲಯಗಳಲ್ಲಿ ಆರೋಗ್ಯ ಸಮೀಕ್ಷೆಗೆ ಬರುವವರಿಗೆ ಸಮರ್ಪಕ ಮತ್ತು ವಸ್ತುನಿಷ್ಠ ಮಾಹಿತಿ ನೀಡುವ ಮೂಲಕ ಸಹಕರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸಾರ್ವಜನಿಕರಿಗೆ ಮನವಿ ಮಾಡಿದರು.

ನಗರದ ಅಲ್ಲಾಪುರ ಬೇಸ್ ಹಾಗೂ ಪೈಲ್ವಾನ್‍ಗಲ್ಲಿ ಕಂಟೈನ್ಮೆಂಟ್ ವಲಯಗಳಿಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು.

ಕೋವಿಡ್-19 ಅಪಾಯಕಾರಿ ಮತ್ತು ಸಾಂಕ್ರಾಮಿಕ ರೋಗವಾಗಿರುವ ಹಿನ್ನೆಲೆಯಲ್ಲಿ ಎಲ್ಲರು ಒಟ್ಟುಗೂಡಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಈ ವಲಯಗಳಲ್ಲಿ ಪ್ರತಿ ಮನೆಗೆ ಆರೋಗ್ಯ ಸಮೀಕ್ಷೆಗಾಗಿ ಆರೋಗ್ಯ ಕಾರ್ಯಕರ್ತರು ಭೇಟಿ ನೀಡುತ್ತಿದ್ದು, ಅವರಿಗೆ ಸಹಕರಿಸುವಂತೆ ತಿಳಿಸಿದರು.

ADVERTISEMENT

ಜಿಲ್ಲೆಯ ಕಂಟೈನ್ಮೆಂಟ್ ವಲಯಗಳಲ್ಲಿ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತೆಯರು ಆರೋಗ್ಯ ಸಮೀಕ್ಷೆ ಕೈಗೊಳ್ಳುತ್ತಿದ್ದು, ಇವರಿಗೆ ಸ್ವ ಸಹಾಯ ಗುಂಪುಗಳು ಮತ್ತು ಸಮುದಾಯ ಕಾರ್ಯಕರ್ತರು ಕೈಜೋಡಿಸಿ ಸೂಕ್ತ ಆರೋಗ್ಯ ಮಾಹಿತಿ ಸಂಗ್ರಹಿಸಬೇಕು ಎಂದರು.

ಈ ಕಂಟೈನ್ಮೆಂಟ್ ವಲಯಗಳಲ್ಲಿನ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಲಾಗುವುದು. ಅವಶ್ಯಕ ಆಹಾರ ಕಿಟ್‍ಗಳನ್ನು ಪೂರೈಸಲಾಗುವುದು. ಶೌಚಾಲಯಗಳ ನಿರ್ಮಾಣಕ್ಕೆ ಪಾಲಿಕೆ ಆಯುಕ್ತರಿಂದ ಸೂಕ್ತ ಕ್ರಮ ಆಗಲಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ಕಂಟೈನ್ಮೆಂಟ್ ವಲಯಗಳಲ್ಲಿನ ಸಾರ್ವಜನಿಕರು ಯಾವುದೇ ಪರಿಸ್ಥಿತಿಯಲ್ಲಿ ಮನೆಗಳಿಂದ ಹೊರಗೆ ಬಂದು ತಿರುಗಾಡಬಾರದು. ಆರೋಗ್ಯ ಸಮೀಕ್ಷೆಗೆ ಬರುವ ತಂಡಗಳಿಗೆ ತಪ್ಪು ಮಾಹಿತಿ ನೀಡುವುದಾಗಲಿ, ಅಸಹಕಾರ ಕಂಡುಬಂದಲ್ಲಿ ತಕ್ಷಣ ಪ್ರಕರಣ ದಾಖಲಿಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಡಿವೈಎಸ್‍ಪಿ ಲಕ್ಷ್ಮಿನಾರಾಯಣ, ಗೋಳಗುಮ್ಮಟ ಡಿವೈಎಸ್‍ಪಿ ಸುಲ್ಫಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ.ಮುಕುಂದ ಗಲಗಲಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕವಿತಾ, ಪಿಎಸ್‍ಐ ರಾಜೇಶ ಚವ್ಹಾಣ, ಪೈಲ್ವಾನ್‍ಗಲ್ಲಿ ಜಮಾತ್ ಮುಖ್ಯಸ್ಥ ಮಹೇಬೂಬ್ ಪಾಷಾ ಹಕಿಂ, ಪೀಟರ್ ಅಲೆಕ್ಝಾಂಡರ್, ಡಾ. ಝೆನಂತ್, ಡಾ.ಗುಂದಬಾವಡಿ, ಡಾ. ಬಾಲಕೃಷ್ಣ, ಡಾ.ಸಂತೋಷ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.