ADVERTISEMENT

ಡೋಣಿ ನದಿಯಲ್ಲಿ ಪ್ರವಾಹ; ಹಡಗಿನಾಳ ಸಂಪರ್ಕ ಕಡಿತ, ಕೊಚ್ಚಿ ಹೋದ ಯುವಕ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 17:07 IST
Last Updated 28 ಆಗಸ್ಟ್ 2021, 17:07 IST
ವಿಜಯ‍ಪುರ ನಗರದ ಕೆ.ಸಿ.ಮಾರುಕಟ್ಟೆ ರಸ್ತೆಯಲ್ಲಿ ಗುಂಡಿಬಿದ್ದಿರುವ ರಸ್ತೆಯಲ್ಲಿ ಮಳೆ ನೀರು ನಿಂತು ಕೆಸರುಮಯವಾಗಿದ್ದು, ಜನ–ವಾಹನ ಸಂಚಾರಕ್ಕೆ ಅಡಚಣೆಯಾಗಿದೆ–ಪ್ರಜಾವಾಣಿ ಚಿತ್ರ
ವಿಜಯ‍ಪುರ ನಗರದ ಕೆ.ಸಿ.ಮಾರುಕಟ್ಟೆ ರಸ್ತೆಯಲ್ಲಿ ಗುಂಡಿಬಿದ್ದಿರುವ ರಸ್ತೆಯಲ್ಲಿ ಮಳೆ ನೀರು ನಿಂತು ಕೆಸರುಮಯವಾಗಿದ್ದು, ಜನ–ವಾಹನ ಸಂಚಾರಕ್ಕೆ ಅಡಚಣೆಯಾಗಿದೆ–ಪ್ರಜಾವಾಣಿ ಚಿತ್ರ   

ವಿಜಯಪುರ: ಬಸವನ ಬಾಗೇವಾಡಿ, ವಿಜಯಪುರ, ತಾಂಬಾ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಧಾರಾಕಾರ ಮಳೆ ಸುರಿದಿದ್ದು, ಯುವಕನೊಬ್ಬ ಹಳ್ಳ ದಾಟುವಾಗ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾನೆ.

ಬಸವನ ಬಾಗೇವಾಡಿ ತಾಲ್ಲೂಕಿನ ನೇಗಿನಾಳ-ಮುಳ್ಳಾಳ ನಡುವೆ ಹರಿಯುವ ಹಳ್ಳವನ್ನು ಶುಕ್ರವಾರ ರಾತ್ರಿ ದಾಟುವಾಗ ಮಂಜುನಾಥ ಪಾಟೀಲ(23) ಕೊಚ್ಚಿ ಹೋಗಿದ್ದು, ಯುವಕನ ಪತ್ತೆಯಾಗಿ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ಶನಿವಾರ ದಿನಪೂರ್ತಿ ಕಾರ್ಯಾಚರಣೆ ನಡೆಸಿದರು.

ಎರಡು ದಿನಗಳಿಂದ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗತೊಡಗಿದೆ.ಶನಿವಾರ ಸಂಜೆ ಆರಂಭವಾದ ಮಳೆಯು ತಡರಾತ್ರಿ ವರೆಗೂ ವಿಜಯಪುರ ನಗರದಲ್ಲಿ ಸುರಿಯಿತು. ನಗರದ ಗುಂಡಿ ಬಿದ್ದು, ಕೆಸರುಮಯವಾಗಿರುವ ರಸ್ತೆಗಳಲ್ಲಿ ಜನ, ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ADVERTISEMENT

ತಗ್ಗು ಪ್ರದೇಶ, ಹೊಲಗಳಲ್ಲಿ ಮಳೆ ನೀರು ನಿಂತಿರುವುದು ಕಂಡುಬಂದಿತು. ಮಳೆಯಿಂದ ಬೆಳೆಗಳಿಗೆ ಅನುಕೂಲವಾಗಿದೆ.

ಸಂಪರ್ಕ ಕಡಿತ:

ತಾಳಿಕೋಟೆ ಪಟ್ಟಣದ ಬಳಿ ಹರಿಯುತ್ತಿರುವ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಪಟ್ಟಣದಿಂದ ಹಡಗಿನಾಳ ಗ್ರಾಮಕ್ಕೆ ಶನಿವಾರ ಸಂಪರ್ಕ ಕಡಿತವಾಗಿದೆ.

ಹಡಗಿನಾಳ ಸೇರಿದಂತೆ ಕಲ್ಲದೇವನಹಳ್ಳಿ, ಮುಕಿಹಾಳ, ಹಗರಗುಂಡ, ಹರನಾಳ, ಶಿವಪೂರ, ನಾಗೂರ ರಸ್ತೆ ಬಂದ್ ಆಗಿದೆ. ಇನ್ನು ಡೋಣಿ ನದಿಯಾಚಿಗಿನ ಜಮೀನುಗಳ ರೈತರು ಜಮೀನುಗಳಿಗೆ ಹೋಗಲು ಪರದಾಡುವಂತಾಗಿದೆ.

ಸಂಪರ್ಕ ಕಡಿತಗೊಂಡ ಗ್ರಾಮಗಳ ಜನರು ಮಿಣಜಗಿ ಮೂಲಕ 10 ರಿಂದ 15 ಕಿಮೀ ಸುತ್ತುವರೆದು ತಾಳಿಕೋಟೆ ಪಟ್ಟಣ ಸೇರುವಂತಾಗಿದೆ.

ಇನ್ನು ಎರಡು ದಿನ ಭಾರಿ ಮಳೆಯಾಗುವ ಮೂನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಪ್ರವಾಹ ಮುಂದುವರೆಯುವ ಲಕ್ಷಣಗಳಿವೆ.

ಈ ರಸ್ತೆಯಲ್ಲಿ ಮೇಲ್ಮಟ್ಟದ ಡೋಣಿ ನದಿ ದಾಟಲು ಸೇತುವೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆದಿದ್ದು ಮಂದಗತಿಯಲ್ಲಿ ನಡೆಯುತ್ತಿದೆ. ಇದರಿಂದ ಡೋಣಿ ನದಿ ದಾಟುವ ಜನರ ಸಂಕಟಕ್ಕೆ ಅಡ್ಡಿಯಾಗಿದೆ.

ಇನ್ನಾದರೂ ಕಾಮಗಾರಿಗೆ ವೇಗವನ್ನು ನೀಡಿ ಶಿಘ್ರದಲ್ಲಿಯೇ ಕಾಮಗಾರಿ ಮುಕ್ತಾಯಗೊಳಿಸಿ ಪ್ರಯಾಣಿಕರಿಗೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಜನರ ಒತ್ತಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.