ವಿಜಯಪುರ: ಸಿಗಡಿ ಕೃಷಿ ಉದ್ಯಮವು ಪ್ರಸ್ತುತ ದಿನಮಾನದಲ್ಲಿ ಉತ್ತಮ ಬೇಡಿಕೆ ಇದೆ. ಒಳನಾಡು ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಲು ಹೆಚ್ಚಿನ ಅವಕಾಶಗಳಿದ್ದು, ರೈತರಿಗೆ ಉತ್ತಮ ಲಾಭವನ್ನು ತಂದು ಕೊಡುವ ಜೊತೆಗೆ ಸ್ಥಳೀಯವಾಗಿ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದು ಎಂದು ಅವಂತಿ ಫೀಡ್ ಸಂಸ್ಥೆಯ ವಲಯ ನಿರ್ದೇಶಕ ನರೇಂದ್ರಬಾಬು ಹೇಳಿದರು.
ನಗರದ ಭೂತನಾಳ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ಸಿಗಡಿ ಉತ್ಪಾದನೆ ಮತ್ತು ಮಾರುಕಟ್ಟೆ ವಿಷಯ ಕುರಿತು ರೈತರಿಗೆ ಏರ್ಪಡಿಸಿದ್ದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಸಿಗಡಿ ಉದ್ಯಮವು ಅಂತರರಾಷ್ಟ್ರೀಯ ಮಾರುಕಟ್ಟೆ ಹೊಂದಿದ್ದು, ಆರೋಗ್ಯದ ದೃಷ್ಟಿಯಿಂದಲೂ ಸಹ ಈ ಆಹಾರವು ಉತ್ತಮವಾಗಿದೆ. ರೈತರು ಕೇವಲ ಮೂರರಿಂದ ನಾಲ್ಕು ತಿಂಗಳಲ್ಲಿ ಸಿಗಡಿ ಕೃಷಿಯನ್ನು ಮಾಡಿ ಮಾರುಕಟ್ಟೆಗೆ ಕೊಂಡೊಯ್ಯಬಹುದು. ಪ್ರಸ್ತುತ ಮಾರುಕಟ್ಟೆಯ ದರವು ಸುಮಾರು ₹400 ರಿಂದ ₹500 ದರಕ್ಕೆ ಮಾರಾಟವಾಗುತ್ತಿದೆ ಎಂದರು.
ಮತ್ಸ್ಯ ಸೇವಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಹರಿಶ್ಚಂದ್ರ ಜಾದವ್ ಮಾತನಾಡಿ, ಮಣ್ಣು ಮತ್ತು ನೀರಿನ ಬಗ್ಗೆ ರೈತರಿಗೆ ಅರಿವು ಮೂಡಿಸುವುದು ನಮ್ಮ ಕೇಂದ್ರದ ಆಶಯವಾಗಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೀನುಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ವಿಜಯಕುಮಾರ್ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದ ಮೀನು,ಸಿಗಡಿ ಆಹಾರ ತಯಾರಿಕಾ ಕಂಪನಿಗಳು ಈ ರೀತಿ ಮುಂದೆ ಬಂದು ಒಳನಾಡು ಕ್ಷೇತ್ರದಲ್ಲಿ ಸಿಗಡಿ ಕೃಷಿಗೆ ಹೆಚ್ಚು ಒತ್ತು ನೀಡುವುದರ ಮೂಲಕ ಉತ್ತರ ಕರ್ನಾಟಕದಲ್ಲಿ ಸಿಗಡಿ ಉದ್ಯಮವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯ ಬಹುದು ಎಂದು ಸಲಹೆ ನೀಡಿದರು.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರಕ್ಕೆ ಬರುವುದರಿಂದ ಅಧಿಕ ಲಾಭವನ್ನು ಪಡೆಯಬಹುದು ಎಂದು ಹೇಳಿದರು.
ಮೀನುಮರಿ ಉತ್ಪಾದನೆ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಅಲ್ತಾಫ್ ಮನಗೂಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಡಾ. ವಿಜಯ ಅತನೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.