ವಿಜಯಪುರ: ಬಿ.ಡಿ.ಎದಿಂದ ಹೊಸ ಬಡಾವಣೆ ನಿರ್ಮಾಣವಾಗುತ್ತಿದ್ದು, ಅರ್ಹ ಬಡವರಿಗೆ ಕೇವಲ ₹2 ಲಕ್ಷಕ್ಕೆ ನಿವೇಶನ ನೀಡಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಇಲ್ಲಿನ ಅಡವಿಶಂಕರಲಿಂಗ ದೇವಸ್ಥಾನದ ಹತ್ತಿರ ಪ್ರವಾಸೋದ್ಯಮ ಇಲಾಖೆಯಿಂದ ₹50 ಲಕ್ಷ ಮೊತ್ತದಲ್ಲಿ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಿ.ಡಿ.ಎ ನಿವೇಶನ ಖರೀದಿಸುವವರಿಗಾಗಿ ₹ 5.5 ಲಕ್ಷ ನೇರವಾಗಿ ಅವರ ಖಾತೆಗೆ ನೀಡುವ ಮೂಲಕ ನಗರದ ಕಡು ಬಡವರು ಸಹ ಸ್ವಂತಮನೆ ಹೊಂದುವ ಕನಸು ಈಡೇರಿಸಲಾಗುವುದು ಎಂದರು.
ಮುಂದಿನ ಆರು ತಿಂಗಳಲ್ಲಿ ವಿಜಯಪುರ ನಗರದ ಎಲ್ಲ ಬೀದಿಗಳಿಗೆ 26 ಸಾವಿರ ಎಲ್.ಇ.ಡಿ ಲೈಟ್ಗಳನ್ನು ಅಳವಡಿಸಲಾಗುವುದು. ಇದರಿಂದ ಶೇ 60ರಷ್ಟು ವಿದ್ಯುತ್ ಉಳಿತಾಯವಾಗುತ್ತದೆ ಎಂದು ಹೇಳಿದರು.
ನಗರದಲ್ಲಿ ₹ 230 ಕೋಟಿ ಮೊತ್ತದಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ಮಂಜೂರಾಗಿದ್ದು, ಸದ್ಯ ಇರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಭೂಗತ ಕೇಬಲ್ ಅಳವಡಿಕೆ ಮಾಡಲಾಗುವುದು. ಇದರಿಂದಾಗಿ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಯಿಂದಾಗುವ ಅನಾಹುತ ತಪ್ಪುತ್ತವೆ ಎಂದರು.
ನಿರಂತರವಾಗಿ ನಗರದ ಜನತೆಗೆ ಕುಡಿಯುವ ನೀರು ಪೂರೈಕೆ, ಗಾರ್ಡನ್ಗಳಿಗೆ ನೀರೊದಗಿಸುವ ಮೂಲಕ ಇನ್ನೆರಡು ವರ್ಷದಲ್ಲಿ ವಿಜಯಪುರ ನಗರವನ್ನು ಗಾರ್ಡನ್ ಸಿಟಿ ಮಾಡಲಾಗುವುದು ಎಂದರು.
ದೇವಸ್ಥಾನದ ಅಧ್ಯಕ್ಷ ಶಂಕರ ಹೇರಲಗಿ, ಸಿದ್ಧೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ, ಸಾಯಿಬಣ್ಣ ಭೂವಿ ಸಮಾಜದ ಕಾರ್ಯದರ್ಶಿ ಶಿವರುದ್ರ ಬಾಗಲಕೋಟಿ, ದೇವಸ್ಥಾನದ ಕಾರ್ಯದರ್ಶಿ ವೀರಭದ್ರ ಹೇರಲಗಿ, ಸಂತೋಷ ಪಾಟೀಲ, ಪಾಂಡುಸಾಹುಕಾರ ದೊಡ್ಡಮನಿ, ಸೂರಪ್ಪ ಹೇರಲಗಿ, ಅಧಿಕಾರಿಗಳಾದ ಮಲ್ಲಿಕಾರ್ಜುನ ಮತ್ತಿಕಟ್ಟಿ, ಸಂಗಪ್ಪ ಹೇರಲಗಿ, ಜಗದೀಶ ಬಿರಾದಾರ, ಈರಣ್ಣ ಬಡಿಗೇರ, ಪರಶುರಾಮ ಬಿಂಗಾಳೆ, ಶಿವರಾಜ ಬಾಡಗಂಡಿ, ರಾಹುಲ್ ಔರಂಗಬಾದ್, ಶಿವಪ್ಪ ಗಂಟಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಾಹುಲ್ ಜಾಧವ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.