ADVERTISEMENT

ವಿಜಯಪುರ: ಮರ್ಯಾದೆಗೇಡು ಹತ್ಯೆ, ಕುಟುಂಬಕ್ಕೆ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 12:40 IST
Last Updated 25 ಅಕ್ಟೋಬರ್ 2021, 12:40 IST
   

ವಿಜಯಪುರ:ಅಲಮೇಲ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆಗೊಳಗಾದ ರವಿ ನಿಂಬರಗಿ ಅವರ ಕುಟುಂಬದವರನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನಿಯೋಗವು ಭೇಟಿ ಮಾಡಿ, ಸಾಂತ್ವನ ಹೇಳಿತು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ನೀಲಾ, ಅಫಜಲಪುರ ತಾಲ್ಲೂಕಿನ ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಬಸ್ಸಮ್ಮ ಗುತ್ತೆದಾರ, ಪ್ರಾಂತ ರೈತ ಸಂಘದ ಕಲಬುರಗಿ ಜಿಲ್ಲಾ ಮುಖಂಡ ಶ್ರೀಮಂತ ಬಿರಾದಾರ ಮತ್ತು ಸಾಹಿತಿಗಳಾದ ಡಾ.ಪ್ರಭು ಖಾನಾಪುರೆ ನಿಯೋಗದಲ್ಲಿ ಇದ್ದರು.

ಯುವಕನನ್ನು ಕೊಂದಿದ್ದಾಗಿ ಒಪ್ಪಿಕೊಂಡ ಇಬ್ಬರೊಂದಿಗೆ ಇನ್ನೂ ಆರು ಜನ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ತಮ್ಮ ಧರ್ಮದಲ್ಲದ ಯುವಕನೊಂದಿಗೆ ತಮ್ಮ ಮನೆಯ ಮಗಳು ಪ್ರೀತಿಸಿರುವುದರಿಂದ ಯುವಕನನ್ನೇ ಹತ್ಯೆ ಮಾಡಿರುವುದನ್ನು ನಿಯೋಗ ತೀವ್ರವಾಗಿ ಖಂಡಿಸಿತು.

ADVERTISEMENT

ಜನತೆಯ ಮನಸ್ಸಿನಲ್ಲಿ ಧಾರ್ಮಿಕ ಮೂಲಭೂತವಾದ ಬೆಳೆಯುತ್ತಿರುವುದು ಅಪಾಯ ಮತ್ತು ಯುವಜನತೆಯ ಬಾಳ ಸಂಗಾತಿಯ ಆಯ್ಕೆಯ ಹಕ್ಕಿನ ಮೇಲಿನ ದಾಳಿ ಇದಾಗಿದೆ. ಯುವಜನತೆಯನ್ನು ಭಯ ಮತ್ತು ತಲ್ಲಣಕ್ಕೆ ತಳ್ಳುತ್ತಿರುವಂತಹ ಈ ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಇಲಾಖೆಯು ಕೂಡಲೇ ಉಳಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತಾಗಬೇಕು ಹಾಗೂ ಹತ್ಯೆಯಾದ ಯುವಕನ ತಾಯಿಗೆ ಪರಿಹಾರಧನ ಒದಗಿಸಿ ಅವಳ ಉಪಜೀವನಕ್ಕೆ ಆಸ್ಪದ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.