ವಿಜಯಪುರ: ಐಎಎಸ್ ಎಂಬುದು ಸ್ಟೇಟಸ್ ಅಲ್ಲ, ಜವಾಬ್ದಾರಿ ಹುದ್ದೆ. ಸರ್ಕಾರಕ್ಕೆ, ಜನರಿಗೆ, ದೇಶಕ್ಕೆ ಒಳ್ಳೆಯ ಕೆಲಸ ಯಾವುದೇ ಹುದ್ದೆಯಲ್ಲಿದ್ದರೂ ಮಾಡಬಹುದು. ಯಾವ ಹುದ್ದೆ ಕೂಡ ಕಡಿಮೆ ಅಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದರು.
ಯುಪಿಎಸ್ಸಿ ಪರೀಕ್ಷೆ ಪಾಸಾಗಲು ಟಾಪ್ ಟು ಡೌನ್ ಅಧ್ಯಯನ ನಡೆಸಬೇಕು. ನಿರಂತರ ಅಧ್ಯಯನ, ತಾಳ್ಮೆ ಬೇಕು ಎಂದರು.
ಪ್ರತಿಯೊಂದು ವಿಷಯ ಕುರಿತು ಪ್ರಾಥಮಿಕ ಜ್ಞಾನ ಇರಬೇಕು. ಎನ್ಸಿಇಆರ್ಟಿ ಪಠ್ಯಕ್ರಮದ 6 ರಿಂದ 12ನೇ ತರಗತಿ ವರೆಗಿನ ಪುಸ್ತಕಗಳನ್ನು ಓದಬೇಕು. ಪಾಠ ಮುಗಿದ ಬಳಿಕ ರಿವಿಜನ್ ಸಂದರ್ಭದಲ್ಲಿ ತಪ್ಪದೆ ಬರೆಯಬೇಕು. ಇದು ಓದಲು ಅನುಕೂಲ ಆಗುತ್ತದೆ. ನಾವು ಏನೇ ಓದಲಿ, ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಐಎಎಸ್ ಮಾಡಬೇಕು ಎನ್ನುವವರು ಇದೇ ವಿಷಯದಲ್ಲಿ ಪದವಿ ಪಡೆದಿರಬೇಕೆಂದಿಲ್ಲ. ಪ್ರತಿಯೊಂದು ವಿಷಯವನ್ನು ಸಮಗ್ರವಾಗಿ ಓದಬೇಕು. ಸಮಯ ತೆಗೆದುಕೊಂಡು ವಿಷಯ ಆಯ್ಕೆ ಮಾಡಿಕೊಳ್ಳಬೇಕು. ಆರ್ಥಿಕ ಸಮಸ್ಯೆ ಇದ್ದರೆ, ಸಹಾಯ ಮಾಡುವವರಿಗೆ ಆತ್ಮವಿಶ್ವಾಸ ಮೂಡುವಂತೆ ಮಾಡಬೇಕು ಎಂದರು.
ಆರ್ಥಿಕ ತೊಂದರೆ ಇದ್ದರೆ ತರಾತುರಿಯಲ್ಲಿ ಸಾಲ ಮಾಡಿ ಕುಟುಂಬಕ್ಕೆ ಹೊರೆ ಮಾಡಿ, ಅರ್ಧಕ್ಕೆ ಓದುವುದನ್ನು ನಿಲ್ಲಿಸುವ ಬದಲು, ಪದವಿ ಮುಗಿದ ಬಳಿಕ ನಾಲ್ಕು ವರ್ಷ ಕೆಲಸ ಮಾಡಿ ಹಣ ಕೂಡಿಸಿ, ನಂತರ ಐಎಎಸ್ ಮಾಡಿ. ಯಾವುದೇ ತೊಂದರೆ ಆಗದು. ನಾನು ಸಹ ಸ್ಟಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿ, ಬಳಿಕ ಐಎಎಸ್ ಆಗಿರುವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.