ADVERTISEMENT

ಅಭಿವೃದ್ಧಿಗಾಗಿ ಮಾತ್ರ ಜಿಲ್ಲೆಯ ಬೇಡಿಕೆ: ಕಾಮಗೊಂಡ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 13:03 IST
Last Updated 29 ಡಿಸೆಂಬರ್ 2023, 13:03 IST
<div class="paragraphs"><p>ಇಂಡಿ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಆಗ್ರಹಿಸಿ, ಪಟ್ಟಣದ ಬುಶ್ರಾ ಲಿಬ್ರಲ್ ಎಜ್ಯಕೇಷನ ಅಸೋಸಿಯೇಷನ್‌ ಇಂಡಿ (ರಿ) ವತಿಯಿಂದ ಶುಕ್ರವಾರ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಅಬಿದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು.&nbsp;</p></div>

ಇಂಡಿ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಆಗ್ರಹಿಸಿ, ಪಟ್ಟಣದ ಬುಶ್ರಾ ಲಿಬ್ರಲ್ ಎಜ್ಯಕೇಷನ ಅಸೋಸಿಯೇಷನ್‌ ಇಂಡಿ (ರಿ) ವತಿಯಿಂದ ಶುಕ್ರವಾರ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಅಬಿದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು. 

   

ಇಂಡಿ: ಅಭಿವೃದ್ಧಿಗಾಗಿ ಇಂಡಿ ಜಿಲ್ಲೆಯಾಗಿಸಲು ಮನವಿ ಮಾಡಲಾಗುತ್ತಿದೆಯೆ ಹೊರತು ಜನರ ಮಧ್ಯದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮಾಡುತ್ತಿಲ್ಲ ಎಂದು ಇಂಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಕಾಮಗೊಂಡ ಹೇಳಿದರು.

ಶುಕ್ರವಾರ ಇಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ಬ್ರಿಟಿಷರ ಕಾಲದಿಂದಲೂ ಸಿಂದಗಿ ಒಳಗೊಂಡು ಉಪಕಂದಾಯ ವಿಭಾಗಾಧಿಕಾರಿಗಳ ಕಚೇರಿ, ಡಿವೈಎಸ್ಪಿ ಕಚೇರಿಗಳನ್ನು ಹೊಂದಿದೆ. ಇವೆರಡೂ ತಾಲ್ಲೂಕುಗಳ ಮಧ್ಯ ಆಡಳಿತದ ದೃಷ್ಟಿಯಿಂದ ಯಾವುದೇ ಭಿನ್ನಾಭಿಪ್ರಾಯ ಬಂದಿಲ್ಲ. ಇಂಡಿ ಶಾಸಕರು ವಿಧಾನಸಭೆಯ ಪೂರ್ವದಲ್ಲಿಯೇ ಈ ಭಾಗದ ಅಭಿವೃದ್ಧಿಯ ಕನಸನ್ನು ಹೊತ್ತು ಇಂಡಿ ಜಿಲ್ಲೆ ಮಾಡಬೇಕೆಂದು ಮತ್ತು ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳನ್ನು ಸಂವಿಧಾನದ 371 (ಜೆ) ಅಡಿಯಲ್ಲಿ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ ಎಂದರು.

ADVERTISEMENT

ಇಲ್ಲಿನ ಮಠಾಧೀಶರು ಕಳೆದ ನಾಲ್ಕಾರು ವರ್ಷಗಳ ಹಿಂದೆಯೇ ಇಂಡಿ ಜಿಲ್ಲೆಯನ್ನಾಗಿ ಮಾಡಿ, ಅಭಿವೃದ್ಧಿ ಮಾಡಿ ಎಂದು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಇದೀಗ ಜಿಲ್ಲೆಯ ಜನಪ್ರತಿನಿಧಿಗಳ, ಮಠಾಧೀಶರ ಒತ್ತಡದ ಮೇರೆಗೆ ಮುಖ್ಯಮಂತ್ರಿ ಅವರು ಜನಾಭಿಪ್ರಾಯ ಸಂಗ್ರಹಕ್ಕೆ ಸೂಚನೆ ನೀಡಿದ್ದಾರೆ. ಅವರ ಸೂಚನೆಯ ಮೇರೆಗೆ ತಾಲ್ಲೂಕು ಆಡಳಿತ ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ. ಜನಾಭಿಪ್ರಾಯ ಏನೇ ಇದ್ದರೂ ಸ್ವಾಗತಾರ್ಹ ಎಂದು ತಿಳಿಸಿದರು.

ಭೀಮಾ ನದಿಯ ನೀರು ಸದ್ಭಳಕೆ ಮಾಡಿಕೊಳ್ಳಲು ಮತ್ತು ಸಮಗ್ರ ಅಭಿವೃದ್ಧಿಗಾಗಿ ಜಿಲ್ಲೆಯಾಗಿಸಿ ಎಂದು ಕೇಳುತ್ತಿದ್ದೇವೆ. ಪಟ್ಟಣದಲ್ಲಿ ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ಮಂಡಳಿಗೆ ಸರ್ಕಾರ ಅನುಮತಿ ನೀಡಿದೆ. ಇದಾದ 2 ವರ್ಷಗಳಲ್ಲಿ ತಾಲ್ಲೂಕಿನಲ್ಲಿರುವ ಪ್ರಮುಖ ಲಿಂಬೆ ಬೆಳೆಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಜಿಐ ಟ್ಯಾಗ್ ಸಿಕ್ಕಿದೆ. ಇದು ಅಭಿವೃದ್ಧಿ ಪರ್ವದ ಮೊದಲ ಮೆಟ್ಟಿಲು. ಪಟ್ಟಣದ  ಸುತ್ತಮುತ್ತ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಜಿಲ್ಲಾಡಳಿತದ ಅಗತ್ಯವಿದೆ ಎಂದರು.

ಇಂಡಿ ಜಿಲ್ಲಾ ಕೂಗು ಪಕ್ಷಾತೀತ, ಜಾತ್ಯತೀತ, ಧರ್ಮಾತೀತವಾಗಿದ್ದು, ಎಲ್ಲಾ ಜನಸಮುದಾಯದ ಸದಸ್ಯರು ಜಿಲ್ಲೆಯಾಗಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಯಾರೂ ಇದರಲ್ಲಿ ರಾಜಕೀಯ ತರಬೇಡಿ ಎಂದು ಹೇಳಿದರು.

ಡಾ.ರಮೇಶ ಪೂಜಾರಿ, ಪುರಸಭೆಯ ಸದಸ್ಯ ಸತೀಶ ಕುಂಬಾರ, ನಿವೃತ್ತ ಪ್ರಾಚಾರ್ಯ ಎ.ಎಸ.ಗಾಣಿಗೇರ, ಕಿರಣ ಜ್ಯೋಶಿ, ಸಂತೋಷ ಪರಿಶಣ್ಣನವರ, ಪಾಪು ಕಿತ್ತಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.