ಸಿಂದಗಿ: ‘ನ್ಯಾ.ನಾಗಮೋಹನ್ ದಾಸ್ ಅವರ ಒಳಮೀಸಲಾತಿ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ’ ಎಂದು ಖಂಡಿಸಿ ದಲಿತ ಸೇನೆ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಪಟ್ಟಣದ ತಾಲ್ಲೂಕು ಪ್ರಜಾಸೌಧದ ಎದುರು ಪ್ರತಿಭಟನೆ ನಡೆಸಿದರು.
ದಲಿತ ಸೇನೆ ತಾಲ್ಲೂಕು ಸಮಿತಿ ಅಧ್ಯಕ್ಷ ಮಹೇಶ ಜಾಬಾನೂರ ಮಾತನಾಡಿ, ‘ನ್ಯಾ.ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗವು ಒಳಮೀಸಲಾತಿ ಕುರಿತು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿಗೆ ಸಂಬಂಧಪಟ್ಟ ಛಲವಾದಿ, ಆದಿದ್ರಾವಿಡ, ಪರಿಯನ್-ಪರೆಯ, ಆದಿಚಂದ್ರ, ಆದಿ ಕರ್ನಾಟಕ ಇನ್ನೂ ಹಲವಾರು ಜಾತಿಗೆ ಸಂಬಂಧಪಟ್ಟ ಜಾತಿಗಳನ್ನು ಬೇರೆ, ಬೇರೆ ಗುಂಪಿಗೆ ಸೇರಿಸಿ ಹೊಲೆಯ ಸಮುದಾಯದ ಜನಸಂಖ್ಯೆಯನ್ನು ಕುಗ್ಗಿಸಲಾಗಿದೆ. ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹೊಲೆಯ ಜಾತಿಯನ್ನು ಮುಗಿಸುವ ಹುನ್ನಾರ ಈ ವರದಿಯಿಂದ ಕಂಡು ಬಂದಿದೆ’ ಎಂದು ಟೀಕಿಸಿದರು.
‘ರಾಜ್ಯ ಸರ್ಕಾರ ಆ.19ರಂದು ನಡೆಯುವ ವಿಶೇಷ ಸಚಿವ ಸಂಪುಟದಲ್ಲಿ ವರದಿ ಕುರಿತಾಗಿ ವಿಸ್ತೃತವಾಗಿ ಚರ್ಚಿಸಿ ಆಗಿರುವ ಪ್ರಮಾದವನ್ನು ಸರಿಪಡಿಸಿ ಇನ್ನೊಮ್ಮೆ ಸಮೀಕ್ಷೆ ನಡೆಸಿ ಬಲಗೈ ಸಮುದಾಯಕ್ಕೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.
ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಹುಯೋಗಿ ತಳ್ಳೊಳ್ಳಿ, ಎಸ್.ಬಿ.ಖಾನಾಪೂರ ವಕೀಲ, ರಮೇಶ ನಡುವಿನಕೇರಿ ಮಾತನಾಡಿದರು.
ಪ್ರತಿಭಟನಕಾರರು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು. ಬಸವರಾಜ ತಳಕೇರಿ, ಹನುಮಂತ ಯಂಟಮಾನ, ಉಮೇಶ ಹಜೇನವರ, ಅರ್ಜುನ ಜಾಬಾನೂರ, ದೇವೀಂದ್ರ ಪೂಜಾರಿ, ತಿರುಪತಿ ಬಂಡಿವಡ್ಡರ ಹಾಗೂ ಪ್ರಕಾಶ ಹಾಲಹಳ್ಳಿ, ಶರಣು ಮಾಡಬಾಳ, ಶಿವೂ ಸುಲ್ಪಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.