ಬಸವನಬಾಗೇವಾಡಿ: ಪಟ್ಟಣದಲ್ಲಿ ಶಾಖೆ ತೆರೆದಿರುವ ದಿ. ಜಮಖಂಡಿ ಅರ್ಬನ್ ಕೋ- ಆಪ್ ಬ್ಯಾಂಕ್ ಉತ್ತಮ ಸೇವೆ ನೀಡುತ್ತಿದ್ದು, ಸಾಲ ಸೌಲಭ್ಯ ನೀಡುವುದರಿಂದ ಜನರಿಗೆ ಅನುಕೂಲವಾಗಲಿದೆ. ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಬಡ್ಡಿ, ಸಮೇತ ತೀರಿಸಿ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ದಿ.ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕಿನ 15ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಜಮಖಂಡಿ ಅರ್ಬನ್ ಬ್ಯಾಂಕ್ ರಾಜ್ಯದಲ್ಲೇ ಮಾದರಿ ಬ್ಯಾಂಕ್ ಆಗಿ ಅಭಿವೃದ್ಧಿ ಹೊಂದಲಿ. ಮುಂದಿನ ದಿನಗಳಲ್ಲಿ ಶೆಡ್ಯೂಲ್ಡ್ ಬ್ಯಾಂಕ್ ಆಗಲಿ ಎಂದು ಸಚಿವ ಹಾರೈಸಿದರು.
ಜಮಖಂಡಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ ರಾಹುಲ್ ಎಸ್. ಕಲೂತಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಮಖಂಡಿ ಅರ್ಬನ್ ಬ್ಯಾಂಕ್ ವರ್ಷದಲ್ಲಿ 6 ಹೊಸ ಶಾಖೆಗಳನ್ನು ತೆರದು ಬೃಹದಾಕಾರದ ಮುಖ್ಯ ಕಚೇರಿ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಬ್ಯಾಂಕ್ ವರ್ಷದಲ್ಲಿ ₹120 ಕೋಟಿ ಠೇವಣಿ ಸಂಗ್ರಹಿಸಿ ಪ್ರಸ್ತುತ ಒಟ್ಟು ₹450 ಕೋಟಿಗೂ ಅಧಿಕ ಠೇವಣಿ ಸಂಗ್ರಹವಿದೆ. ಬಸವನ ಬಾಗೇವಾಡಿ ಪಟ್ಟಣವಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲೂ ಉತ್ತಮ ಬ್ಯಾಂಕಿಂಗ್ ಸೇವೆ ಸಲ್ಲಿಸಲು ಬದ್ದವಾಗಿದ್ದೇವೆ ಎಂದರು.
ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬ್ಯಾಂಕ್ನ ಹಿರಿಯ ನಿರ್ದೇಶಕ ಜಿ.ಎಸ್. ನ್ಯಾಮಗೌಡ, ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ರಾಜ್ಯ ವಿಮಾ ಮಹಾಮಂಡಳ ಅಧ್ಯಕ್ಷ ಶಿವನಗೌಡ ಬಿರಾದಾರ, ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ಹಿರಿಯ ನ್ಯಾಯವಾದಿ ಬಿ.ಕೆ.ಕಲ್ಲೂರ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಬ್ಯಾಂಕಿನ ಅಧ್ಯಕ್ಷ ಹೊನ್ನಪ್ಪ ಗುಂಡಳ್ಳಿ ಸೇರಿದಂತೆ ಬ್ಯಾಂಕಿನ ನಿರ್ದೇಶಕರು, ಶಾಖೆಯ ಸಲಹಾ ಸಮಿತಿ ಸದಸ್ಯರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.