ADVERTISEMENT

‘ಕನಕರ ಸಾಮಾಜಿಕ ಮೌಲ್ಯ ಪ್ರಸ್ತುತ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 14:36 IST
Last Updated 3 ಡಿಸೆಂಬರ್ 2020, 14:36 IST
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನಕ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ  ಪ್ರಭಾರ ಕುಲಪತಿ ಪ್ರೊ.ಓಂಕಾರಗೌಡ ಕಾಕಡೆ, ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಪ್ರೊ.ಎಸ್.ಎ.ಖಾಜಿ, ಪ್ರೊ.ಡಿ.ಎಂ.ಮದರಿ, ಡಾ.ಡಿ.ಎಂ.ಮದರಿ, ಡಾ. ಕಿರಣ್.ಎನ್. ಪುಷ್ಪ ನಮನ ಸಲ್ಲಿಸಿದರು
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನಕ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ  ಪ್ರಭಾರ ಕುಲಪತಿ ಪ್ರೊ.ಓಂಕಾರಗೌಡ ಕಾಕಡೆ, ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಪ್ರೊ.ಎಸ್.ಎ.ಖಾಜಿ, ಪ್ರೊ.ಡಿ.ಎಂ.ಮದರಿ, ಡಾ.ಡಿ.ಎಂ.ಮದರಿ, ಡಾ. ಕಿರಣ್.ಎನ್. ಪುಷ್ಪ ನಮನ ಸಲ್ಲಿಸಿದರು   

ವಿಜಯಪುರ: ದುಡಿಯುವ ಮತ್ತು ಮೇಲ್ವರ್ಗದ ಜನರ ಮಧ್ಯೆ ಸಮಾನತೆಯನ್ನು ಸಾಧಿಸಲು ಧಾರ್ಮಿಕ ನೆಲೆಯ ಮೂಲಕ ಸಾಮಾಜಿಕ ಹೋರಾಟವನ್ನು ಮಾಡಿದ ಕನಕದಾಸರ ಸಾಮಾಜಿಕ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ರಾಯಬಾಗ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ವೈ.ಹಿಮ್ಮಡಿ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನಕ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ‘ಕನಕದಾಸರ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದುಡಿಮೆ ಮತ್ತು ಜ್ಞಾನ ಎರಡೂ ಸಮಾನವಾಗಿದ್ದರೆ ಮಾತ್ರ ಸಮಾಜದ ಒಳಿತು ಸಾಧ್ಯ ಎಂಬ ಕನಕದಾಸರ ಆಶಯದಂತೆ ನಾವೆಲ್ಲರೂ ಅವರ ವಿಚಾರಧಾರೆಗಳನ್ನು ಮತ್ತು ಜಾತ್ಯತೀತ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಾಮಾಜಿಕ ಬದಲಾವಣೆಯತ್ತ ಕಾರ್ಯಪ್ರವೃತ್ತರಾಗಬಹುದು ಎಂದು ಅಭಿಪ್ರಾಯಪಟ್ಟರು.

ADVERTISEMENT

ಅವಮಾನಿತ ಸಮುದಾಯದ ಧ್ವನಿಯಾಗಿ ಧಾರ್ಮಿಕ ಚಳವಳಿಗಳ ಮುಖಾಂತರ ಹೋರಾಡಿದ ಕನಕದಾಸರು ದುಡಿಮೆ ಮಾಡುವವರು ಕೀಳಲ್ಲ ಎಂಬುದನ್ನು ತಿಳಿಸಿಕೊಡುವುದರ ಜೊತೆಗೆ ಸಾಮಾಜಿಕ ಸುಧಾರಣೆಗೆ ಕಾರಣರಾದರು ಎಂದು ಹೇಳಿದರು.

ಮಹಿಳಾ ವಿವಿಯ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಮಾತನಾಡಿ, ಆಹಾರ ಧಾನ್ಯಗಳ ಮುಖಾಂತರ ಜನರ ನಡುವೆ ಇದ್ದ ಮೇಲು-ಕೀಳು ಎಂಬ ಸಂಘರ್ಷವನ್ನು ಸರಳವಾಗಿ ಬಗೆಹರಿಸಿ, ದುಡಿಮೆಯ ವರ್ಗಕ್ಕೆ ಆತ್ಮಸ್ಥೈರ್ಯವನ್ನು ಮೂಡಿಸಿ ಸಮನ್ವಯ ಸಾಧಿಸಿದ ಕನಕದಾಸರು ನಮಗೆ ಇಂದಿಗೂ ಮಾದರಿಯಾಗಿದ್ದಾರೆ ಎಂದರು.

ಮಹಿಳಾ ವಿವಿಯ ಪ್ರಭಾರ ಕುಲಪತಿ ಪ್ರೊ.ಓಂಕಾರಗೌಡ ಕಾಕಡೆ ಮಾತನಾಡಿ, ಕನಕದಾಸರ ಕೃತಿಗಳನ್ನು, ಜೀವನ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯ ಎಂದು ಹೇಳಿದರು.

ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥ ಡಾ.ಎಂ.ಪಿ.ಬಳಿಗಾರ ಕೀರ್ತನೆ ಹಾಡಿದರು. ಕನಕ ಅಧ್ಯಯನ ಪೀಠದ ಸಂಯೋಜಕ ಡಾ.ಕಿರಣ್ ಎನ್, ಸಂಶೋಧನಾ ವಿದ್ಯಾರ್ಥಿನಿ ಜಕ್ಕವ್ವ ಭೀ.ವಠಾರ, ಗೀತಾ ಎಚ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.