ADVERTISEMENT

ಕುರುಬ ಸಮುದಾಯ ಎಸ್.ಟಿಗೆ ಸೇರ್ಪಡೆಗೆ ಆಗ್ರಹಿಸಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:51 IST
Last Updated 24 ನವೆಂಬರ್ 2020, 16:51 IST

ಸಿಂದಗಿ: ಕುರುಬ ಸಮುದಾಯವನ್ನು ಎಸ್.ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ನ29 ರಂದು ಬಾಗಲಕೋಟೆ ನಗರದಲ್ಲಿ ವಿಭಾಗಮಟ್ಟದ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಸಮುದಾಯದ ಒಂದು ಲಕ್ಷ ಮಂದಿ ಸಮಾವೇಶಗೊಳ್ಳಲಿದ್ದಾರೆ ಎಂದು ಕುರುಬರ ಎಸ್.ಟಿ ಹೋರಾಟ ಸಮಿತಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾ ಕುದರಗೊಂಡ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎಸ್.ಟಿ ಮೀಸಲಾತಿ ಸಿಗಬೇಕು ಎಂಬುದು ಕಟ್ಟಕಡೆಯ ಕುರುಬನ ಕೂಗಾಗಿದೆ. ಬಹಳ ವರ್ಷಗಳಿಂದ ಮೀಸಲಾತಿಗಾಗಿ ನಿರಂತರ ಹೋರಾಟ ನಡೆದಿದೆ. ಈಗಾಗಲೇ ಕುರುಬ ಸಮುದಾಯದ ಗೊಂಡಾ ಗಳಿಗೆ ಎಸ್.ಟಿ ಜಾತಿ ಪ್ರಮಾಣಪತ್ರ ಕೇವಲ ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಗೊಂಡಾ ಮತ್ತು ಕುರುಬ ಎರಡೂ ಒಂದೇ ಬೇರೆ ಅಲ್ಲ ಎಂದು ಕುರುಬ ಸಮುದಾಯದ ರಾಜ್ಯ ಪ್ರಮುಖ ಶ್ರೀಶೈಲ ಕವಲಗಿ ವಿಶ್ಲೇಷಿಸಿದರು.

ಮೀಸಲಾತಿ ದೊರಕಿಸಿಕೊಳ್ಳುವ ಹಿನ್ನೆಲೆಯಲ್ಲಿ ವಿವಿಧ ರೀತಿಯಲ್ಲಿ ಹೋರಾಟ ರೂಪಿಸಲಾಗುವುದು. ಜನವರಿ 15 ರಿಂದ ಕಾಗಿನೆಲೆ ಸುಕ್ಷೇತ್ರದಿಂದ 15 ದಿನಗಳ ಕಾಲ ಬೆಂಗಳೂರಿಗೆ ಪಾದಯಾತ್ರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಈ ಹೋರಾಟ ಪಕ್ಷಬೇಧ ಮರೆತು ನಡೆಸುತ್ತಿರುವ ಕುರುಬ ಸಮುದಾಯ ಅತ್ಯಂತ ಪ್ರಮುಖ ಹೋರಾಟವಾಗಿದೆ. ಎಲ್ಲ ಕುರುಬ ಸಮುದಾಯದ ಜನರು ಒಗ್ಗಟ್ಟಿನಿಂದ ಹೋರಾಟದಲ್ಲಿ ಮುನ್ನುಗ್ಗಬೇಕು ಎಂದು ಸಿದ್ದು ಬುಳ್ಳಾ, ಪ್ರಕಾಶ ಹಿರೇಕುರುಬರ, ರವಿ ನಾಯ್ಕೋಡಿ, ದತ್ತಾತ್ರೇಯ ಯಡಗಿ, ಸಿದ್ದು ಕೆರಿಗೊಂಡ, ಬನ್ನೆಪ್ಪ ಜೋಗಿ ಮನವಿ ಮಾಡಿಕೊಂಡರು.

ADVERTISEMENT

ಶಿವಾನಂದ ಗಣಿಹಾರ, ಸುದರ್ಶನ ಜಂಗಣ್ಣಿ, ಜಿ.ಎಸ್.ಹೊಸಗೌಡರ, ಶ್ರೀಶೈಲ ಕುದರಗೊಂಡ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.