ವಿಜಯಪುರ: ‘ಕಾರ್ಮಿಕರು ದೇಶದ ಆರ್ಥಿಕ ಅಭಿವೃದ್ಧಿಯ ಸಜೀವ ಸಂಪತ್ತು. ಅವರ ಹಕ್ಕು ಬಾಧ್ಯತೆಗಳನ್ನುಸರ್ಕಾರ ಮತ್ತು ಉದ್ಯಮಗಳು ಸಕಾಲದಲ್ಲಿ ಪೂರೈಸುವ ಮೂಲಕ ಕಾರ್ಮಿಕರ ಬದುಕನ್ನು ಸುಂದರಗೊಳಿಸಬೇಕು’ ಎಂದು ನ್ಯಾಯಾಧೀಶ ಪ್ರಭಾಕರರಾವ್ ಹೇಳಿದರು.
ನಗರದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಭಾಭವನದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಭಾರತ ಸೇವಾದಳ, ಆಹೇರಿ ಬಸವೇಶ್ವರ ಕರ್ಮವೀರಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಜಗತ್ತಿನ ಯಾವುದೇ ದೇಶವು ಪ್ರಗತಿ ಮತ್ತು ಅಭಿವೃದ್ಧಿ ಹೊಂದಬೇಕಾದರೆ ಕಾರ್ಮಿಕರ ಪಾತ್ರ ಬಹಳ ಪ್ರಮುಖವಾಗಿದೆ. ಅವರು ಗೌರವಯುತವಾಗಿಕಾರ್ಯನಿರ್ವಹಿಸಲು ಅಗತ್ಯವಾದ ಪರಿಸರ ನಿರ್ಮಾಣ, ಸಮೃದ್ಧಿ, ನೆಮ್ಮದಿಯ ಬದುಕನ್ನು ಖಾತ್ರಿ ಪಡಿಸುವ ವಾತಾವರಣ ಕಲ್ಪಿಸಿಕೊಡಬೇಕು. ಜೀವನ ನಿರ್ವಹಣೆಗೆ ತೊಂದರೆ ಆಗದಷ್ಟು ಕನಿಷ್ಠ ಕೂಲಿ ಕೊಡಬೇಕು’ ಎಂದರು.
ಮಾಜಿ ಶಾಸಕ ಎನ್.ಎಸ್.ಖೇಡ, ಸಮಾಜ ಚಿಂತಕ ರಿಯಾಜ್ ಫಾರೂಕಿ, ವಕೀಲ ಶ್ರೀಧರ ಕುಲಕರ್ಣಿ ಮಾತನಾಡಿದರು. ಇದೇ ವೇಳೆ ಕಾರ್ಮಿಕ ಮುಖಂಡರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಬಾಪುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕಾಸನೀಸ್, ಉದ್ಯಮಿ ಡಿ.ಎಸ್.ಗುಡ್ಡೋಡಗಿ, ವಕೀಲರಾದ ಶ್ರೀಶೈಲ ಸಜ್ಜನ, ಬಿ.ಎಂ.ನೂಲವಿ, ಡಿ.ಎಸ್.ಗೊಬ್ಬಣ್ಣವರ, ಶ್ರೀಪಾದ ಕುಲಕರ್ಣಿ, ಸಂಜೀವ ಪಾಟೀಲ ಇದ್ದರು.
ಬಂಡೆಪ್ಪ ತೇಲಿ ಸ್ವಾಗತಿಸಿದರು. ಶ್ರೀಶೈಲ ತೇಲಿ ನಿರೂಪಿಸಿದರು. ಎಸ್.ಎಲ್.ಹಿರೇಮಠ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.