ವಿಜಯಪುರ: ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಎಂ.ಬಿ. ಪಾಟೀಲ ನಿವಾಸದ ಎದುರು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಲಾಯಿತು.
ಮಾದಿಗ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ, ಎಂ.ಬಿ ಪಾಟೀಲರು ತಮ್ಮ ವೈಫಲ್ಯ ಮುಚ್ಚಿಡಲು ಹಿರಿಯ ಮುತ್ಸದ್ದಿ ಕಾರಜೋಳವರ ವಿರುದ್ಧ ಟೀಕಿಸುವುದು, ಕೀಳಮಟ್ಟವಾಗಿ, ಅಸಭ್ಯವಾಗಿ ಮಾತನಾಡುವುದು ಹೊಸತೇನಲ್ಲ. ಆದರೆ, ಅಸಂಬದ್ಧ ಶಬ್ದಗಳಿಂದ ನಿಂದಿಸುವುದು ಖಂಡನೀಯ ಎಂದರು.
ಎಂ.ಬಿ.ಪಾಟೀಲ ಅವರು ಮಾಜಿ ಶಾಸಕ ರಾಜು ಆಲಗೂರ ಅವರನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಸಮಾಜದಲ್ಲಿನ ದಲಿತರನ್ನು ಹಾಗೂ ಕೆಳ ವರ್ಗದ ಜನರಲ್ಲಿ ಭಿನ್ನಮತ ತಂದು ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಹಿರಿಯ ಮುತ್ಸದ್ದಿ ಗೋವಿಂದ ಕಾರಜೋಳರಿಗೆ ಏಕ ವಚನದಲ್ಲಿ ಮಾತಾಡಿರುವ ಎಂ.ಬಿ.ಪಾಟೀಲರು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು ಎಂದು ಮಾದಿಗ ದಂಡೋರದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಅಡಕಿ ಹೇಳಿದರು.
ಸಮಾಜದ ಮುಖಂಡರಾದ ಪ್ರಶಾಂತ ಬಿರಾದಾರ, ಬಾಲಪ್ಪ ಗೂಗಿಹಾಳ, ವಿಠ್ಠಳ ನಡುವಿನಕೇರಿ, ಡಿ.ಬಿ ಮೂದುರು, ದೀಪಕ ಹೊಸೂರಕರ, ಮಲ್ಲಿಕಾರ್ಜುನ ಹಳಿಮನಿ, ಅರ್ಜುನ ವಾಲಿ, ಪ್ರಕಾಶ ಹಲಸಂಗಿ, ರಾಘವೆಂದ್ರ ವಿಜಯಪುರ, ಸತೀಶ ಮಾದರ, ಯು.ಆರ್ ಮಠ, ಸುರೇಶ ನಾಗರಾಳ, ಸುರೇಶ ಆಸಂಗಿ, ಮಲಕಪ್ಪ ಬಾಗೇವಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.