ADVERTISEMENT

ವಿಜಯಪುರ: ಕಾಲೇಜು ಹೋರಾಟಕ್ಕೆ ಕೈಜೋಡಿಸಿದ ಕಲಾವಿದರು

ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಬೇಡಿಕೆ; ಅನಿರ್ದಿಷ್ಟಾವಧಿ ಧರಣಿ 15 ದಿನ ಪೂರೈಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:34 IST
Last Updated 3 ಅಕ್ಟೋಬರ್ 2025, 5:34 IST
ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ  ಗುರುವಾರ ಜಿಲ್ಲಾ ಸಂಗೀತ ಕಲಾವಿದರು ಪಾಲ್ಗೊಡು, ಹೋರಾಟದ ಹಾಡುಗಳನ್ನು ಹಾಡುವ ಮೂಲಕ  ಬೆಂಬಲ ಸೂಚಿಸಿದರು 
ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ  ಗುರುವಾರ ಜಿಲ್ಲಾ ಸಂಗೀತ ಕಲಾವಿದರು ಪಾಲ್ಗೊಡು, ಹೋರಾಟದ ಹಾಡುಗಳನ್ನು ಹಾಡುವ ಮೂಲಕ  ಬೆಂಬಲ ಸೂಚಿಸಿದರು    

ವಿಜಯಪುರ: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಗುರುವಾರ 15 ದಿನ ಪೂರೈಸಿತು.

ಜಿಲ್ಲಾ ಸಂಗೀತ ಕಲಾವಿದರು ಧರಣಿಯಲ್ಲಿ ಪಾಲ್ಗೊಡು, ಹೋರಾಟದ ಹಾಡುಗಳನ್ನು ಹಾಡುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಕಲಾವಿದ ಪ್ರಕಾಶ ಮಹೀಂದ್ರಕರ ಮಾತನಾಡಿ,  ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ನಮಗೆ ಸಿಗುವ ದೊಡ್ಡ ಅನುಕೂಲಗಳೆಂದರೆ ಉತ್ತಮ ಆರೋಗ್ಯ ಸೇವೆ. ಒಂದು ವೈದ್ಯಕೀಯ ಕಾಲೇಜು ಎಂದರೆ ಕೇವಲ ತರಗತಿ ಕೋಣೆಗಳಲ್ಲ. ಅದರ ಜೊತೆಗೆ ಒಂದು ಅತ್ಯಾಧುನಿಕವಾದ ಸರ್ಕಾರಿ ಚಿಕಿತ್ಸೆ ಲಭಿಸಲಿದೆ. ಇದರಿಂದಾಗಿ ನಮ್ಮ ಸುತ್ತಮುತ್ತಲಿನ ಸಾವಿರಾರು ಜನರಿಗೆ ಅದರಲ್ಲೂ ಬಡವರಿಗೆ, ತುರ್ತು ಚಿಕಿತ್ಸೆಗಳು, ತಜ್ಞರ ಸೇವೆಗಳು ಮತ್ತು ದೊಡ್ಡ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ನಮ್ಮ ಸ್ಥಳೀಯ ಮಟ್ಟದಲ್ಲೇ ಸಿಗುತ್ತದೆ. ಚಿಕ್ಕಪುಟ್ಟ ತೊಂದರೆಗಳಿಗೂ ಬೇರೆ ನಗರಗಳಿಗೆ ಓಡಾಡುವುದು ತಪ್ಪುತ್ತದೆ, ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ, ನಮ್ಮ ಮಕ್ಕಳು ವೈದ್ಯರಾಗುವ ಕನಸು ಕಾಣಬಹುದು, ಕಲಿಕೆಗಾಗಿ ಅವರು ದೂರದ ನಗರಗಳಿಗೆ ಹೋಗುವುದು ತಪ್ಪಲಿದೆ ಎಂದರು.

ADVERTISEMENT

ಸಂಗೀತ ಕಲಾವಿದ ಪ್ರಕಾಶ ಮಠ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ನಮ್ಮ ಸ್ಥಳೀಯ ಯುವಜನತೆಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಹೊಸ ದಾರಿ ತೆರೆದುಕೊಳ್ಳುತ್ತದೆ. ಕಾಲೇಜು ಮತ್ತು ಆಸ್ಪತ್ರೆಯ ಸ್ಥಾಪನೆಯಿಂದಾಗಿ  ಇಲ್ಲಿ ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಬಂದು ನೆಲೆಸುತ್ತಾರೆ. ಇದರಿಂದ ನಮ್ಮ ನಗರದಲ್ಲಿ ವ್ಯಾಪಾರ, ವಹಿವಾಟು ಹೆಚ್ಚಿ, ಆರ್ಥಿಕ ಅಭಿವೃದ್ಧಿಗೆ ದೊಡ್ಡ ಉತ್ತೇಜನ ಸಿಗುತ್ತದೆ ಎಂದು ಹೇಳಿದರು.

ಹೋರಾಟದ ಮೂಲಕ ನಮ್ಮ ಒಗ್ಗಟ್ಟು ಮತ್ತು ಸಂಕಲ್ಪ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಯಬೇಕು. ರಾಜಕೀಯ ಬದಿಗಿಟ್ಟು, ಜಾತಿ ಭೇದ ಮರೆತು, ಇಡೀ ನಮ್ಮ ನಗರದ ಸಮುದಾಯ ಈ ಬೇಡಿಕೆಯ ಹಿಂದೆ ಗಟ್ಟಿಯಾಗಿ ನಿಂತಿದೆ ಎಂಬುದನ್ನು ನಾವು ತೋರಿಸಬೇಕು ಎಂದರು. 

ಪ್ರಶಾಂತ ಚೌಧರಿ ಮಾತನಾಡಿ, ನಮಗೆ ಸಿಗಲೇಬೇಕು, ಈ ಹೋರಾಟ ನಿಲ್ಲದು, ಕಾಲೇಜು ಸ್ಥಾಪನೆಯಾಗುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಹೇಳಿದರು.

ಕಲಾವಿದರಾದ ದೇವರಾಜ ಮಾನೆ, ಅನಿಲ ಚವ್ಹಾಣ, ಗಂಗಾ ಬಾಗಡೆ, ವೀರೇಶ ನಾಟಿಕರ, ಪ್ರಶಾಂತ ಸಿಂಗರ್, ಗೀತಾ ಒಡೆಯರ್, ಮಾರುತಿ ಬೂದಿಹಾಳ, ರಾಜೇಶ ಛಲವಾದಿ, ವೀರೇಶ ತಂಬಾಕೆ, ಮುಬಾರಕ್ ದಫೇದಾರ್, ಶಿವಾನಂದ ಭಜಂತ್ರಿ, ಪರಶುರಾಮ ಭಜಂತ್ರಿ, ರವಿ ಕೋರಿ,ಆನಂದ ಹೂಗಾರ, ಫಯಾಜ್ ಕಲಾದಗಿ, ರಾಜೇಶ್ವರಿ ಮುಂಜಣಿ, ಅರವಿಂದ ಕಂಬಾರ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿ ಬೆಂಬಲ ನೀಡಿದರು.

ಇದು ಕೇವಲ ಒಂದು ಕಟ್ಟಡದ ಅಥವಾ ಕೆಲವು ಹುದ್ದೆಗಳ ಪ್ರಶ್ನೆಯಲ್ಲ. ಇದು ನಮ್ಮ ನಗರದ ಭವಿಷ್ಯದ ಪ್ರಶ್ನೆ ನಮ್ಮ ಮಕ್ಕಳ ವೈದ್ಯಕೀಯ ಶಿಕ್ಷಣದ ಪ್ರಶ್ನೆಯಾಗಿದೆ
ಪ್ರಕಾಶ ಮಹೀಂದ್ರಕರ ಕಲಾವಿದ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.