ADVERTISEMENT

ವಿಜಯಪುರ|ಅಪ್ಪಾಜಿ ನಾಡಗೌಡರಿಗೆ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ: ಶಾಸಕ ಯಶವಂತರಾಯಗೌಡ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 6:01 IST
Last Updated 28 ಅಕ್ಟೋಬರ್ 2025, 6:01 IST
ಯಶವಂತರಾಯಗೌಡ ಪಾಟೀಲ
ಯಶವಂತರಾಯಗೌಡ ಪಾಟೀಲ   

ವಿಜಯಪುರ: ‘ಶಾಸಕರು ಸಚಿವ ಸ್ಥಾನ ಕೇಳಬಾರದು ಎಂದೇ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹೀಗಾಗಿ ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಅವರಿಗೆ ಈಗ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ’ ಎಂದು ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿ.ಎಸ್‌. ನಾಡಗೌಡರು ಈಗಾಗಲೇ ಎರಡು ಬಾರಿ ಸಚಿವರಾಗಿದ್ದಾರೆ. ಅಲ್ಲದೇ, ಹಾಲಿ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಈಗ ಸಚಿವ ಸ್ಥಾನ ಕೇಳುವುದರಲ್ಲಿ ಅರ್ಥವಿಲ್ಲ’ ಎಂದರು.  

‘ಇಂಡಿ ಮತಕ್ಷೇತ್ರಕ್ಕೆ ಇಲ್ಲಿಯವರೆಗೆ ಸಚಿವ ಸ್ಥಾನ ದೊರಕಿಲ್ಲ. ಈ ಕೊರತೆ ಮುಂಬರುವ ಸಚಿವ ಸಂಪುಟ ಪುನರ್‌ರಚನೆ ವೇಳೆ ನೀಗುವ ವಿಶ್ವಾಸವಿದೆ. ಪಕ್ಷದ ವರಿಷ್ಠರು ಈ ಹಿಂದೆ ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಾಗ ನಯವಾಗಿ ತಿರಸ್ಕರಿಸಿದ್ದೇನೆ. ಈ ಹಿಂದೆ ಪಕ್ಷದ ವರಿಷ್ಠರು ಕೊಟ್ಟಿರುವ ಆಶ್ವಾಸನೆಯಂತೆ ಸಚಿವ ಸ್ಥಾನ ನೀಡಲಿ’ ಎಂದು ಹಕ್ಕೊತ್ತಾಯ ಮಾಡಿದರು. 

ADVERTISEMENT

‘40 ವರ್ಷಗಳ ಕಾಲ ನಮ್ಮ ಮನೆತನ ಕಾಂಗ್ರೆಸ್‌ ಪಕ್ಷದಲ್ಲಿ ರಾಜಕಾರಣ ಮಾಡಿದೆ. ನಾನು ಶುದ್ಧ ಕಾಂಗ್ರೆಸ್ಸಿಗ. 22 ಕ್ಯಾರೇಟ್ ಅಲ್ಲ; 24 ಕ್ಯಾರೇಟ್ ಶುದ್ಧ ಕಾಂಗ್ರೆಸ್ಸಿಗ, ನಾನು ಬೇರೆ ಪಕ್ಷದಿಂದ ಬಂದಿಲ್ಲ, ಇಲ್ಲಿಯೇ ಇರುವೆ. ಇದುವರೆಗೂ ಸಚಿವ ಸ್ಥಾನಮಾನ ಸಿಕ್ಕಲ್ಲ. ಆದರೆ, ಜಿಲ್ಲೆಯಲ್ಲಿ ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬಂದವರಿಗೆ ಈಗಾಗಲೇ ಸಚಿವ ಸ್ಥಾನ ದೊರೆತಿದೆ’ ಎಂದು ಶಾಸಕ ಅಪ್ಪಾಜಿ ನಾಡಗೌಡ ಮತ್ತು ಸಚಿವ ಶಿವಾನಂದ ಪಾಟೀಲ ವಿರುದ್ಧ ಪರೋಕ್ಷವಾಗಿ ಅಸಮಾಧಾನ  ಹೊರಹಾಕಿದರು. 

‘ಮುಖ್ಯಮಂತ್ರಿಯ ಈಚೆಗೆ ಇಂಡಿಗೆ ಬಂದಾಗ ನನ್ನ ಕ್ಷೇತ್ರದ ಜನತೆ ಸಚಿವ ಸ್ಥಾನದ ಬೇಡಿಕೆ ಮಂಡಿಸುವ ಆಶಯ ವ್ಯಕ್ತಪಡಿಸಿದಾಗ ನಾನೇ ಅವರನ್ನು ಕೈ ಮುಗಿದು ತಡೆದಿರುವೆ. ನಾನು ಗೌರವಾನ್ವಿತ ರಾಜಕಾರಣಿ, ಹೀಗಾಗಿ ಯಾವ ಗೊಂದಲ ಉಂಟಾಗದಂತೆ ನೋಡಿಕೊಂಡಿರುವೆ’ ಎಂದರು. 

ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಹೆಚ್ಚು ಅನುಕೂಲವಾಗಿವೆ. ಇದನ್ನು ಅಲ್ಲಗಳೆಯಲು ಆಗದು. ಜೊತೆಗೆ ಅಭಿವೃದ್ಧಿಗೆ ಕೊಂಚ ಹಿನ್ನೆಡೆಯಾಗಿರುವುದನ್ನೂ ನಾವು ಒಪ್ಪಿಕೊಳ್ಳಬೇಕಾಗುತ್ತದೆ
ಯಶವಂತರಾಯಗೌಡ ಪಾಟೀಲ ಇಂಡಿ ಶಾಸಕ 

ಸಂಕಷ್ಟದಲ್ಲಿ ಸಕ್ಕರೆ ಕಾರ್ಖಾನೆಗಳು  

‘ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ನಿಯಮಾವಳಿ ಪರಿಷ್ಕರಣೆ ಮಾಡಬೇಕು ಇಲ್ಲವಾದರೆ ಕೈಮಗ್ಗಗಳ ಮಾದರಿಯಲ್ಲಿ ಸಕ್ಕರೆ ಕಾರ್ಖಾನೆಗಳು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ಹಿತ ಎರಡೂ ಮುಖ್ಯ. ಆದರೆ ಕೇಂದ್ರ ಸರ್ಕಾರದ ನೀತಿಗಳಿಂದ ಸಹಕಾರ ವಲಯದ ಸಕ್ಕರೆ ಕಾರ್ಖಾನೆಗಳಿಗೆ ದೊಡ್ಡ ಆತಂಕ ಎದುರಾಗಿದೆ ಎಂದರು. ‘ಇಳುವರಿ ಆಧರಿಸಿ ಎಫ್.ಆರ್.ಪಿ. ನಿಗದಿಯಾಗುತ್ತದೆ. ಭೀಮಾತೀರದಲ್ಲಿ ಕಬ್ಭಿನ ರಿಕವರಿ ಪ್ರಮಾಣ ಕಡಿಮೆ ಹೀಗಾಗಿ ಎಫ್.ಆರ್.ಪಿ ನಿಗದಿಗೊಳಿಸಲು ಏಕರೂಪದ ಮಾನದಂಡ ವಿಧಿಸುತ್ತಿರುವುದು ಸರಿಯಲ್ಲ ಭೌಗೋಳಿಕವಾಗಿ ಭಿನ್ನವಾದ ಪರಿಸ್ಥಿತಿ ಇದೆ ಹೀಗಾಗಿ ಎಂ.ಎಸ್.ಪಿ. ಘೋಷಣೆ ಮಾಡಬೇಕು’ ಎಂದರು. ಈಥೆನಾಲ್ ಆಮದು ಬೇಡ: ಎಥೆನಾಲ್ ಸಂಬಂಧಿಸಿ ಕೇಂದ್ರ ಸರ್ಕಾರ ರೂಪಿಸಿರುವ ನೀತಿ ನಿಯಮವಾವಳಿಗಳು ದೊಡ್ಡ ತೊಡಕಾಗಿವೆ. ಈ ಎಲ್ಲವೂ ಮಾರ್ಪಾಡಾಗಬೇಕು. ಈ ಹಿಂದೆ ಎಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ ನೀಡಿದ ಪರಿಣಾಮ ದೊಡ್ಡ ಮಟ್ಟದಲ್ಲಿ ಎಥೆನಾಲ್ ಉತ್ಪಾದನೆಯಾಗುತ್ತಿದೆ. ಆದರೆ ಬೆಲೆ ಕಡಿಮೆ ಎಂದು ಅಮೆರಿಕದಿಂದ ಆಮದು ಮಾಡಿಕೊಳ್ಳಲು ಮುಂದಾಗಿರುವುದು ದೊಡ್ಡ ಆತಂಕ ಸೃಷ್ಟಿ ಮಾಡಿದೆ ಎಂದರು.  ಉತ್ಪಾದನೆ ಮಾಡಿದ ಎಥೆನಾಲ್ ಅನ್ನು ಕೇಂದ್ರ ಸರ್ಕಾರ ಖರೀದಿ ಮಾಡುತ್ತಿಲ್ಲ ಈ ರೀತಿಯಾದರೆ ಉತ್ಪಾದನೆ ಮಾಡಲು ಉತ್ತೇಜನ ನೀಡಿದ್ದು ಏಕೆ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.