ಆಲಮಟ್ಟಿ: ಸಂಕ್ರಮಣದ ಅಂಗವಾಗಿ ಆಲಮಟ್ಟಿಯಲ್ಲಿ ಸೋಮವಾರ ವಿವಿಧ ಉದ್ಯಾನ, ಕೃಷ್ಣಾ ನದಿ ದಂಡೆ ಸುತ್ತಲೂ ಜನಸಾಗರ ಕಂಡು ಬಂತು. 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದರು.
ಕೃಷ್ಣಾ ನದಿಯ ಆಲಮಟ್ಟಿ ಸುತ್ತಮುತ್ತಲಿನ ನಾನಾ ಕಡೆ ಸ್ನಾನ ಮಾಡುವವರ ಸಂಖ್ಯೆ ಹೆಚ್ಚಿತ್ತು. ರಾಕ್ ಉದ್ಯಾನ, ಲವಕುಶ ಉದ್ಯಾನ, ನದಿಯ ದಂಡೆ, ಪಾರ್ಕಿಂಗ್ ಲಾಟ್ ಸೇರಿದಂತೆ ವಿವಿಧೆಡೆ ಸಂಕ್ರಮಣದ ಬುತ್ತಿ ಸೇವಿಸುತ್ತಿರುವುದು ಕಂಡು ಬಂತು.
ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಲೆ, ಶೇಂಗಾ ಚಟ್ನಿ, ಮೊಸರು ಸೇರಿದಂತೆ ಹಬ್ಬದ ರುಚಿ ಅಡುಗೆ ಸವಿದರು. ಮಕ್ಕಳು, ಹಿರಿಯರು ರಾಕ್ ಉದ್ಯಾನದ ಜೋಕಾಲಿ ಆಡಿದರು. ಸಂಜೆ ಸಂಗೀತ ಕಾರಂಜಿ, ಲೇಸರ್ ಫೌಂಟೇನ್ ನೋಡಿ ಸಂಭ್ರಮಿಸಿದರು.
ಉದ್ಯಾನ ಪ್ರವೇಶಕ್ಕೆ 5 ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿದಿನ ಒಂದು ಲೇಸರ್ ಹಾಗೂ ಸಂಗೀತ ಕಾರಂಜಿ ಪ್ರದರ್ಶನ ನಡೆಯುತ್ತಿತ್ತು. ಆದರೆ, ಸೋಮವಾರ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಐದು ಲೇಸರ್ ಹಾಗೂ ಸಂಗೀತ ಪ್ರದರ್ಶನ ಮಾಡಲಾಯಿತು.
ಬಿಗಿ ಭದ್ರತೆ: ನಿಡಗುಂದಿ ಸಿಪಿಐ ಅಶೋಕ ಚವ್ಹಾಣ ನೇತೃತ್ವದಲ್ಲಿ ಐವರು ಪಿಎಸ್ಐ, 10 ಎಎಸ್ಐ, 63 ಕಾನ್ಸ್ಟೇಬಲ್, 1 ಡಿಆರ್ ತುಕಡಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು. ಅಸಿಸ್ಟೆಂಟ್ ಕಮಾಂಡೆಂಟ್ ಅರುಣ ನೇತೃತ್ವದಲ್ಲಿ 50 ಭದ್ರತಾ ಪಡೆ ಕಾರ್ಯನಿರ್ವಹಿಸಿದರು.
ಅರಣ್ಯ ಇಲಾಖೆಯ ಡಿಎಫ್ಒ ರಾಜಣ್ಣ ನಾಗಶೆಟ್ಟಿ, ಆರ್ಎಫ್ಒ ಮಹೇಶ ಪಾಟೀಲ, ಸತೀಶ ಗಲಗಲಿ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲಿದ್ದು, ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸಲು ನೆರವಾದರು. ಕೆಬಿಜೆಎನ್ಎಲ್ ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜು ಉಪಸ್ಥಿತರಿದ್ದು, ವ್ಯವಸ್ಥೆ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.