ADVERTISEMENT

ನಿಡಗುಂದಿ | ಸಿಲಿಂಡರ್ ಸ್ಫೋಟ: ಮಾಂಸ, ಮೊಟ್ಟೆ ಮಾರಾಟದ ಶೆಡ್‌ಗೆ ಹಾನಿ

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:53 IST
Last Updated 5 ಮೇ 2025, 13:53 IST
ನಿಡಗುಂದಿ ಪಟ್ಟಣದ ವಾಲ್ಮೀಕಿ ಸಭಾಭವನದ ಹತ್ತಿರ ಇದ್ದ ಮಾಂಸ, ಮೊಟ್ಟೆ ಮಾರಾಟ ಮಾಡುವ ಶೆಡ್‌ನಲ್ಲಿ ಸಿಲಿಂಡರ್ ಸಿಡಿದು ಅಂಗಡಿಯೆಲ್ಲಾ ಛಿದ್ರಗೊಂಡಿರುವುದು
ನಿಡಗುಂದಿ ಪಟ್ಟಣದ ವಾಲ್ಮೀಕಿ ಸಭಾಭವನದ ಹತ್ತಿರ ಇದ್ದ ಮಾಂಸ, ಮೊಟ್ಟೆ ಮಾರಾಟ ಮಾಡುವ ಶೆಡ್‌ನಲ್ಲಿ ಸಿಲಿಂಡರ್ ಸಿಡಿದು ಅಂಗಡಿಯೆಲ್ಲಾ ಛಿದ್ರಗೊಂಡಿರುವುದು   

ನಿಡಗುಂದಿ: ಮಾಂಸ, ಕೋಳಿಮೊಟ್ಟೆ ಮಾರಾಟ ಮಾಡುತ್ತಿದ್ದ ಶೆಡ್‌ವೊಂದರಲ್ಲಿ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡು ಶೆಡ್ ಸಂಪೂರ್ಣ ನೆಲಕ್ಕಚ್ಚಿರುವ ಘಟನೆ ಪಟ್ಟಣದ ವಾಲ್ಮೀಕಿ ಸಭಾಭವನದ ಬಳಿ ಸೋಮವಾರ ನಡೆದಿದೆ.

ನಿಡಗುಂದಿ ಪಟ್ಟಣದ ಕಾಸೀಂಸಾಬ ಕಲಾಲ ಎಂಬುವವರಿಗೆ ಸೇರಿದ್ದ ಶೆಡ್‌ನಲ್ಲಿ ಸಿಲಿಂಡರ್‌ ಸೋರಿಕೆ ಆಗಿದ್ದು, ತಿಳಿದಿಲ್ಲ. ಆಕಸ್ಮಿಕವಾಗಿ ಬೆಂಕಿ ಕಡ್ಡಿ ಗೀರಿದ್ದು, ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣ ಅಲ್ಲಿಂದ ಓಡಿ ಹೋದ ಶೆಡ್‌ನ ಮಾಲೀಕರು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಅಗ್ನಿಶಾಮಕ ಠಾಣಾಧಿಕಾರಿ ಪ್ರಮೋದ ಸುಂಕದ ನೇತೃತ್ವದ ಸಿಬ್ಬಂದಿ ತೆರಳಿ ಬೆಂಕಿ ನಂದಿಸಲು ಸ್ಥಳೀಯರಿಗೆ ಸಹಕಾರ ನೀಡಿದರು. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಶೆಡ್‌ನ ಮಾಲೀಕ ಕಾಸೀಂಸಾಬ ಕಲಾಲ ತಿಳಿಸಿದ್ದಾರೆ.

ಅಗ್ನಿಶಾಮಕ ಠಾಣೆಗೆ ಹೆಚ್ಚಿದ ಒತ್ತಡ: ನಿಡಗುಂದಿ ಪಟ್ಟಣಕ್ಕೆ ಶಾಶ್ವತವಾದ ಅಗ್ನಿಶಾಮಕ ಠಾಣೆ ಮಂಜೂರು ಮಾಡಲು ಆಗ್ರಹ ಇದ್ದರೂ ಸಂಬಂಧಿಸಿದ ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂಬ ಆರೋಪಗಳಿವೆ.

ADVERTISEMENT

ಯಾವುದೇ ಬೆಂಕಿ ಅವಘಡ ಸಂಭವಿಸಿದರೂ ದೂರದ ಮುದ್ದೇಬಿಹಾಳ, ಬಸವನ ಬಾಗೇವಾಡಿ ತಾಲ್ಲೂಕಿನಿಂದ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಬರಬೇಕು. ಆದರೆ ಅಷ್ಟರಲ್ಲಾಗಲೇ ಬೆಂಕಿಯ ಜ್ವಾಲೆಗೆ ಸಿಲುಕಿರುವ ಬೆಳೆ, ಅಂಗಡಿ, ಮನೆಗಳು ಸುಟ್ಟು ಭಸ್ಮವಾಗಿರುತ್ತವೆ. ಅಂತಹ ಘಟನೆಗಳು ಮರುಕಳಿಸುವ ಮುನ್ನವೇ ಸಂಬಂಧಿಸಿದ ಜನಪ್ರತಿನಿಧಿಗಳು ಅಗ್ನಿಶಾಮಕ ಠಾಣೆ ಆರಂಭಿಸಲು ಕ್ರಮ ಜರುಗಿಸಬೇಕು ಎಂದು ನಿಡಗುಂದಿ ನಾಗರೀಕರಾದ ಬಸವರಾಜ ಸಾಲಿಮಠ, ಅನಿಲ ಯಾಳವಾರ, ಶರಣು ಶಿವಣಗಿ, ರಾಜು ಮುಚ್ಚಂಡಿ, ಶ್ರೀಕಾಂತ ಶಿವಣಗಿ, ಗಂಗಾಧರ ವಾರದ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.