ಯತ್ನಾಳ
ವಿಜಯಪುರ: ‘ನನ್ನನ್ನು ಮುಗಿಸಲು ಯಾರಿಗೂ ಆಗಲ್ಲ, ಇಡೀ ಕರ್ನಾಟಕದ ಹಿಂದುಗಳು ನನ್ನ ಜೊತೆ ಇದ್ದಾರೆ. ನನ್ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್ ರಕ್ತ ಹರಿಯುತ್ತಿದೆ. ನನ್ನನ್ನು ಮುಗಿಸಲು ಹೋದರೆ ಕರ್ನಾಟಕದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ’ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ
‘ಏಪ್ರಿಲ್ 15 ಯತ್ನಾಳಗೆ ಅಂತಿಮ ದಿನ’ ಎಂಬ ಕಿಡಿಗೇಡಿಗಳ ಆಡಿಯೊ ಹರಿದಾಡುತ್ತಿರುವ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ನನ್ನನ್ನು ಮುಗಿಸುವುದಾಗಿ ಬೆದರಿಕೆ ಒಡ್ಡಿರುವ ಆಡಿಯೊ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಎನ್ನುವುದು ಶೀಘ್ರ ಬಯಲಾಗಲಿದೆ. ರಾಜ್ಯ ಸರ್ಕಾರಕ್ಕೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಆಗದಿದ್ದರೆ ಎನ್ಐಎಗೆ ಕೊಡಲಿ’ ಎಂದು ಆಗ್ರಹಿಸಿದರು.
ಮಾತಿನ ವೇಗದಲ್ಲಿ ಆಗಿದೆ
‘ಹುಬ್ಬಳ್ಳಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಹೆಸರನ್ನು ನಾನು ಎಲ್ಲಿಯೂ ತೆಗೆದುಕೊಂಡಿಲ್ಲ, ಮಹಮ್ಮದ್ ಅಲಿ ಜಿನ್ನಾ ಎನ್ನಲು ಹೋಗಿ ಮಾತಿನ ವೇಗದಲ್ಲಿ ಮಹಮ್ಮದ್ ಪೈಗಂಬರ್ ಎಂದು ಹೇಳಿದ್ದೇನೆ. ಇಸ್ಲಾಂ ಧರ್ಮ ಸಂಸ್ಥಾಪಕರ ಹೆಸರನ್ನು ತೆಗೆದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಕಾಂಗ್ರೆಸ್ನವರನ್ನು ಬಿಟ್ಟರೇ ಬೇರೆಯವರು ಈ ಬಗ್ಗೆ ಮಾತನಾಡಿಲ್ಲ, ವಿಜಯಪುರದಲ್ಲಿ ಗೂಂಡಾಗಿರಿ, ಹಫ್ತಾ ವಸೂಲಿ ಮಾಡಲು ಆಗದೇ ಹತಾಶರಾಗಿರುವ ಕಾಂಗ್ರೆಸಿಗರು ಪೈಗಂಬರ್ಗೆ ನೆಪ ಮಾಡಿಕೊಂಡು, ನನ್ನ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ನಮ್ಮ ಹಿಂದೂ ಧರ್ಮದಲ್ಲಿ ಮತ್ತೊಂದು ಧರ್ಮವನ್ನು ಹೀಯಾಳಿಸುವ ಸಂಸ್ಕೃತಿ ಇಲ್ಲ. ನಮ್ಮ ಗುರು, ಹಿರಿಯರು ಕಲಿಸಿಲ್ಲ. ನಮ್ಮ ಹಿಂದೂ ದೇವರಾದ ರಾಮ, ಕೃಷ್ಣ, ಸರಸ್ವತಿಯನ್ನು ಅವಮಾನಿಸುತ್ತಿರುವವರು ಯಾರು? ಅವರ ವಿರುದ್ಧ ಏಕೆ ಕ್ರಮ ಆಗುತ್ತಿಲ್ಲ? ಅಂತವರಿಗೆ ನಮ್ಮವರೇ ಬೆಂಬಲವಾಗಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.