ADVERTISEMENT

ವಿಜಯಪುರ: ’ಆಕ್ಸಿಜನ್ ಆನ್ ವೀಲ್ಸ್‌’ ಉಚಿತ ಸೇವೆ

ಶ್ರೀಸಿದ್ಧೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರ ಬ್ಯಾಂಕಿನಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 21 ಮೇ 2021, 12:37 IST
Last Updated 21 ಮೇ 2021, 12:37 IST
ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪೋರ್ಟಬಲ್ ಕಾನ್ಸಂಟ್ರೇಟ್ ಆಕ್ಸಿಜನ್ ಮಷಿನ್‍ಗಳನ್ನು ಒಳಗೊಂಡ ಬಸ್‍ಗಳಿಗೆ ಸಂಸ್ಥೆಯ ಪದಾಧಿಕಾರಿಗಳು ಚಾಲನೆ ನೀಡಿದರು
ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪೋರ್ಟಬಲ್ ಕಾನ್ಸಂಟ್ರೇಟ್ ಆಕ್ಸಿಜನ್ ಮಷಿನ್‍ಗಳನ್ನು ಒಳಗೊಂಡ ಬಸ್‍ಗಳಿಗೆ ಸಂಸ್ಥೆಯ ಪದಾಧಿಕಾರಿಗಳು ಚಾಲನೆ ನೀಡಿದರು   

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯ ಶ್ರೀಸಿದ್ಧೇಶ್ವರ ಸಂಸ್ಥೆ ಮತ್ತು ಸಿದ್ಧಸಿರಿ ಸೌಹಾರ್ದ ಸಹಕಾರ ಬ್ಯಾಂಕಿನಿಂದ ಆಕ್ಸಿಜನ್ ಆನ್ ವೀಲ್ಸ್ ಉಚಿತ ಸೇವೆ ಆರಂಭಿಸಲಾಗಿದೆ.

ಸಂಸ್ಥೆಯ ಆರು ಶಾಲಾ ಬಸ್ಸುಗಳನ್ನು ಆಕ್ಸಿಜನ್ ಆನ್ ವೀಲ್ಸ್ ಸೇವೆಗೆ ಬಳಸಿಕೊಳ್ಳಲಾಗಿದೆ. ಈ ಬಸ್ಸಿನಲ್ಲಿ ಪೋರ್ಟಬಲ್ ಕಾನ್ಸಂಟ್ರೇಟ್ ಆಕ್ಸಿಜನ್ ಮಷಿನ್ ಅಳವಡಿಸಲಾಗಿದೆ.

ನಗರ ಪ್ರದೇಶದ 10 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಯಾವುದೇ ವ್ಯಕ್ತಿಗೆ ಆಕ್ಸಿಜನ್ ಕೊರತೆ ಉಂಟಾಗಿ, ಯಾವುದೇ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಇರುವ ಸಂದರ್ಭದಲ್ಲಿ ತುರ್ತಾಗಿ ಬಸ್ಸಿನ ಮೇಲೆ ನಮೋದಿಸಿದ ಮೊಬೈಲ್ ಸಂಖ್ಯೆಗಳಾದ 9606963550 ಹಾಗೂ 9972274549 ಈ ನಂಬರ್‌ಗಳಿಗೆ ಸಂಪರ್ಕ ಮಾಡಿದಲ್ಲಿ ಶೀಘ್ರವೇ ಪೋರ್ಟಬಲ್ ಕಾನ್ಸಂಟ್ರೇಟ್ ಆಕ್ಸಿಜನ್ ಮಷಿನ್ ಒಳಗೊಂಡ ಸಂಸ್ಥೆಯ ಬಸ್ ರೋಗಿಯ ಮನೆಯ ಬಾಗಿಲಿಗೆ ಹೋಗುತ್ತದೆ. ಅಲ್ಲಿ ಬಸ್‍ನಲ್ಲಿಯೇ ಆಕ್ಸಿಜನ್ ಅಳವಡಿಸಿ ಆರೈಕೆ ಮಾಡಲಾಗುವುದು.

ADVERTISEMENT

ಬಳಿಕ ಅದೇ ಬಸ್ಸಿನ ಮೂಲಕ ರೋಗಿಯನ್ನು ಅವರು ಬಯಸಿದ ಆಸ್ಪತ್ರೆಗೆ ಕರೆದುಕೊಂಡು ಬಂದು, ಅಲ್ಲಿ ಬೆಡ್ ಸಿಗುವವರೆಗೆ ಈ ಬಸ್‍ನಲ್ಲಿಯೇ ಆರೈಕೆ ಮಾಡಲಾಗುತ್ತದೆ.

ಪೋರ್ಟಬಲ್ ಕಾನ್ಸಂಟ್ರೇಟ್ ಆಕ್ಸಿಜನ್ ಮಷಿನ್ ಅಳವಡಿಸಿದ ಪ್ರತಿ ಬಸ್‍ನಲ್ಲಿ ಕೇವಲ ಎರಡು ರೋಗಿಗಳಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ.

ಸಿದ್ಧೇಶ್ವರ ದೇವಸ್ಥಾನದ ಮುಂದೆ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪೋರ್ಟಬಲ್ ಕಾನ್ಸಂಟ್ರೇಟ್ ಆಕ್ಸಿಜನ್ ಮಷಿನ್‍ಗಳನ್ನು ಒಳಗೊಂಡ ಬಸ್‍ಗಳಿಗೆ ಸಂಸ್ಥೆಯ ಪದಾಧಿಕಾರಿಗಳು ಚಾಲನೆ ನೀಡಿದರು.

ಸಿದ್ಧೇಶ್ವರ ಸಂಸ್ಥೆ ಚೇರ್ಮನ್ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ಪದಾಧಿಕಾರಿಗಳಾದ ಸದಾನಂದ ದೇಸಾಯಿ, ಸುಧೀರ ಚಿಂಚಲಿ, ಸಿದ್ಧಸಿರಿ ಸೌಹಾರ್ದ ಸಹಕಾರಿ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ, ಸಿದ್ಧೇಶ್ವರ ಸಂಸ್ಥೆ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.