ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಬಸರಕೋಡದಲ್ಲಿ ಬುಧವಾರ ಸಂಜೆ ಬೀಸಿದ ಭಾರಿ ಬಿರುಗಾಳಿ ಹಾಗೀ ಆಲಿಕಲ್ಲು ಸಮೇತ ಮಳೆಗೆ ಪಪ್ಪಾಯ, ದ್ರಾಕ್ಷಿ ಬೆಳೆ ನಾಶವಾಗಿದೆ.
ಗ್ರಾಮದ ರೈತ ಕೆ.ವೈ. ಬಿರಾದಾರ ಅವರ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಂದಾಜು ನಾಲ್ಕು ಸಾವಿರ ಪಪ್ಪಾಯ ಸಸಿಗಳು ನೆಲಕಚ್ಚಿವೆ. ‘ಎರಡು ತಿಂಗಳು ಕಳೆದಿದ್ದರೆ ಫಸಲು ಕೈಗೆ ಬರುತ್ತಿತ್ತು. ಬೆಳೆಗಾಗಿ ₹ 3 ಲಕ್ಷ ಖರ್ಚು ಮಾಡಿದ್ದು ಕೈಗೆ ಬಂದಿದ್ದು ಬಾಯಿಗೆ ಬಾರದಂತಾಗಿದೆ’ ಎಂದು ಬಿರಾದಾರ ಅಲವತ್ತುಕೊಂಡಿದ್ದಾರೆ.
ಗ್ರಾಮದ ಶಿವಾನಂದ ಬಿರಾದಾರ ಅವರು ಆರು ಎಕರೆ ಪ್ರದೇಶದಲ್ಲಿ ಹಾಕಿದ್ದ ದ್ರಾಕ್ಷಿ ತೋಟಕ್ಕೂ ಹಾನಿಯಾಗಿದ್ದು ಬೆಳೆ ನೆಲಕಚ್ಚಿ ನಷ್ಟವುಂಟಾಗಿದೆ.
ಢವಳಗಿ ಹೋಬಳಿಯ ಬಸರಕೋಡ, ರೂಢಗಿ, ಅಗಸಬಾಳ ಭಾಗದಲ್ಲಿ ಬುಧವಾರ ಸಂಜೆ ಬೀಸಿದ ಬಿರುಗಾಳಿಗೆ ಹಲವು ಮರಗಳು ಉರುಳಿ ಬಿದ್ದಿದ್ದು ವಿದ್ಯುತ್ ವ್ಯತ್ಯಯವಾಗಿತ್ತು. ಹೊಲದಲ್ಲಿದ್ದ ತೋಟಗಾರಿಕೆ ಬೆಳೆಯೂ ನೆಲಕಚ್ಚಿದೆ.
ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ರೈತ ಮುಖಂಡ ಗುರುನಾಥಗೌಡ ಬಿರಾದಾರ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.