ದೇವರ ಹಿಪ್ಪರಗಿ: ಐತಿಹಾಸಿಕ ಹಿನ್ನೆಲೆಯ ಪಟ್ಟಣದ ರಾವುತರಾಯ-ಮಲ್ಲಯ್ಯ ಜಾತ್ರೋತ್ಸವ ಶ್ರದ್ಧಾ ಭಕ್ತಿಯೊಂದಿಗೆ ಆರಂಭಗೊಂಡಿದ್ದು, ಬುಧವಾರ(ಅ.8) ಅದ್ಧೂರಿಯ ಬಂಡಿ ಉತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.
ವಿಜಯದಶಮಿಯ ಬಳಿಕ ದ್ವಾದಶಿಯಂದು ಆರಂಭಗೊಂಡು ಸಾಂಪ್ರದಾಯಿಕ ಜಾತ್ರಾ ಮಹೋತ್ಸವ ಹುಣ್ಣಿಮೆಯ ಮರುದಿನ ರಾವುತರಾಯನ ಬಂಡಿ ಉತ್ಸವದೊಂದಿಗೆ ಮುಕ್ತಾಯವಾಗುವುದು. ಇದು ಶತಮಾನದ ಹಿಂದಿನಿಂದಲೂ ನಿರಂತರವಾಗಿ ಪ್ರತಿ ವರ್ಷ ನಡೆದುಬಂದಿದೆ.
ಐತಿಹಾಸಿಕ ಹಿನ್ನೆಲೆ ಜೊತೆಗೆ ಪುರಾಣ, ಜನಪದವು ರಾವುತರಾಯನ ಜಾತ್ರೆಯೊಂದಿಗೆ ತಳಕು ಹಾಕಿಕೊಂಡಿದೆ. ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಜಾತ್ರೆಯು ಆಧುನಿಕತೆಯ ಭರದಲ್ಲೂ ಸಡಗರದ ಜೊತೆ ಶ್ರದ್ಧೆ, ಭಕ್ತಿಯಿಂದ ಮುಂದುವರೆಯುತ್ತಿದೆ.
ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶದ ನೆರೆ ಹೊರೆಯ ಜಿಲ್ಲೆಗಳಲ್ಲಿ ನೆಲೆಸಿರುವ ಭಕ್ತ ಸಮೂಹ ಜಾತ್ರೆಯ ಸಮಯದಲ್ಲಿ ದೇವರ ಹಿಪ್ಪರಗಿಗೆ ಭೇಟಿ ನೀಡಿ ತಮ್ಮ ಆರಾಧ್ಯ ದೈವವಾದ ರಾವುತರಾಯ-ಮಲ್ಲಯ್ಯನ ದರ್ಶನ ಪಡೆದು ಧನ್ಯರಾಗುತ್ತಾರೆ. ಅಶ್ವರೂಢ ರಾವುತರಾಯನಿಗೆ ಪೂಜೆ ಸಲ್ಲಿಸಿ, ದೇವಾಲಯದ ಆವರಣದಲ್ಲಿ ವಗೈಗಳಿಗೆ ಊಟ ಮಾಡಿಸಿ ಪುನೀತರಾಗುತ್ತಾರೆ.
ದಸರಾ ಬಳಿಕ ಬರುವ ದ್ವಾದಶಿಯ ದಿನ ತೆರೆದ ಬಂಡಿಯಲ್ಲಿ ರಾವುತರಾಯ ಅಶ್ವರೂಢನಾಗಿ ಆಸೀನನಾಗುವುದರ ಮೂಲಕ ಜಾತ್ರೆ ಆರಂಭವಾಗುತ್ತದೆ. ಈ ಬಂಡಿ ಮೆರವಣಿಗೆ ಛತ್ರಿ, ಚಾಮರಗಳೊಂದಿಗೆ ರಾವುತರಾಯನ ದೇಗುಲದಿಂದ ಮಲ್ಲಯ್ಯನ ದೇಗುಲದವರೆಗೆ ನಡೆಯುತ್ತದೆ. ಈ ಸಮಯದಲ್ಲಿ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳದಲ್ಲಿ 500 ಕ್ಕೂ ಹೆಚ್ಚು ಜನ ಭಕ್ತರಿಂದ ಪುಷ್ಪಲಂಕಾರ ಜರುಗುತ್ತದೆ. ಇದನ್ನು ಹೂ ಮುಡಿಯುವುದು ಎನ್ನಲಾಗುತ್ತಿದೆ. ಬಳಿಕ ಶೀಡಗಟ್ಟಿ ಹಾಗೂ ಪಾದಗಟ್ಟಿ ಎಂದೇ ಕರೆಯಲಾಗುವ ಸ್ಥಳದಲ್ಲಿ ಕಾರಣಿಕರಿಂದ ಹೇಳಿಕೆ ನಡೆಯುತ್ತವೆ. ಬಳಿಕ ಸಿಂದಗಿ ರಸ್ತೆಯಲ್ಲಿರುವ ಬನ್ನಿ ವೃಕ್ಷಕ್ಕೆ ತೆರಳಿ ಪ್ರದಕ್ಷಿಣೆ ಮಾಡಿ ಮಲ್ಲಯ್ಯನ ದೇವಸ್ಥಾನವನ್ನು ರಾವುತರಾಯ ಪ್ರವೇಶಿಸುತ್ತಾನೆ. ಸಂಪ್ರದಾಯದಂತೆ ಇಲ್ಲಿ ರಾವುತರಾಯ-ಗಂಗೆಮಾಳಮ್ಮರ ಮದುವೆ ಪ್ರಸಂಗ ಜರುಗುತ್ತದೆ.
ಶೀಗೆ ಹುಣ್ಣಿಮೆಯ ದಿನವಾದ ಇಂದು (ಮಂಗಳವಾರ) ಸಕ್ಕರೆ ಲೋಭಾನ ನೈವಿಧ್ಯ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಲಿದೆ. ಜೊತೆಗೆ ಪಟ್ಟಣದ ಹಲವರು ಹಾಗೂ ಗೆಳೆಯರ ಬಳಗದ ಸದಸ್ಯರಿಂದ ಭಕ್ತವೃಂದಕ್ಕೆ ಅನ್ನ ಸಂತರ್ಪಣೆ ಆರಂಭಗೊಂಡಿದೆ. ಜಾತ್ರೆಯ ಕೊನೆಯ ದಿನವಾದ ಬುಧವಾರ ರಾವುತರಾಯ ಪುನಃ ತೆರೆದ ಬಂಡಿಯಲ್ಲಿ ಅಶ್ವರೂಢನಾಗಿ ಮರಳಿ ಸ್ವಸ್ಥಾನಕ್ಕೆ ಮರಳುತ್ತಾನೆ. ಈ ದೃಶ್ಯಾವಳಿ ಕಣ್ಣು ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತ ಸಮೂಹ ಎರಡು ದೇಗುಲಗಳ ಬಳಿ ಸಮ್ಮಿಳಿಸುವುದು ವಿಶೇಷ. ಇದೇ ಸಂದರ್ಭದಲ್ಲಿ ರಾವುತರಾಯ ದೇವಸ್ಥಾನ ಸನಿಹ ಗುಂಡುಕಲ್ಲು, ಉಸುಕಿನ ಚೀಲ ಸೇರಿದಂತೆ ಭಾರ ಎತ್ತುವ ಸ್ಪರ್ಧೆಗಳು ಸಹ ಜರುಗುತ್ತವೆ. ಈ ಎಲ್ಲ ಸಂದರ್ಭದಲ್ಲಿ ಭಕ್ತ ಸಮೂಹ ಏಳಕೋಟಿ, ಏಳಕೋಟಿ, ಏಳಕೋಟಿಗೆ ಎಂಬ ಘೋಷಣೆ, ಜಯಕಾರ ಮೋಳಗಿಸುತ್ತದೆ.
ಐತಿಹಾಸಿಕ ಹಿನ್ನೆಲೆ: ರಾವುತರಾಯ ಮಾರ್ತಾಂಡ ಭೈರವ ಎಂದು ಕರೆಯಲ್ಪಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಮಲ್ಲಾರಿ ಮಹಾತ್ಮೆ ಎಂಬ ಸಂಸ್ಕೃತ ಗ್ರಂಥದಲ್ಲಿ ಉಲ್ಲೇಖವಿದೆ. ಮಣಿ ಮಲ್ಲಾಸುರರು ಎಂಬ ದುಷ್ಟರ ವಧೆಗೆ ಮಾರ್ತಾಂಡ ಭೈರವನಾಗಿ ಅವತರಿಸಿದ ಶಿವನು ಒಬ್ಬ ಮೈಲಾರ. ಈತ ಅಶ್ವರೂಢನಾಗಿ ಹೊರಟು ಮಣಿ ಮಲ್ಲಾಸುರರನ್ನು ವಧಿಸಿದಂತೆ ಇತನ ಮಡದಿ ಗಂಗೆ ಮಾಳಮ್ಮ. ಇವಳನ್ನು ತುಪ್ಪದ ಮಾಳಮ್ಮ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇತನ ವಾಹನ ನಾಯಿ.
ಜಾತ್ರೆಯ ಕೇಂದ್ರ ಬಿಂದುವಾದ ಮಲ್ಲಯ್ಯನ ದೇವಸ್ಥಾನಕ್ಕೆ 1500 ವರ್ಷಗಳ ಇತಿಹಾಸವಿದೆ. ದೇವಾಲಯದ ಹಿಂಬದಿಯ ಐದು ಅಂತಸ್ತಿನ ದೀಪಸ್ಥಂಭ ಮಹಲಗಂಭ ವಿಜಯಪುರದ ಆದಿಲ್ ಶಾಹಿ ಅರಸರ ಕಣ್ಣು ಕುಕ್ಕುವಂತೆ ಮಾಡಿತ್ತು ಎಂಬ ವಿಷಯ ಇತಿಹಾಸದಿಂದ ತಿಳಿದು ಬರುತ್ತದೆ.
ಮಲ್ಲಯ್ಯನ ದೇಗುಲದ ಮುಂದಿರುವ ಹುಣಸೇಮರ 900 ವರ್ಷಗಳಷ್ಟು ಹಳೆಯದಾಗಿದ್ದು, 2011ರಲ್ಲಿ ಘೋಷಿಸಿದ ರಾಜ್ಯದ ಪಾರಂಪರಿಕ ಮರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.