ಬಸವನಬಾಗೇವಾಡಿ: ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿ ರೋಗಿಗಳ ಸೇವೆಯಲ್ಲಿ ಸಂತೃಪ್ತಿ ಕಾಣುತ್ತಿದ್ದಾರೆ ಇಲ್ಲಿನ ತಾಲ್ಲೂಕು ಆಸ್ಪತ್ರೆಯ 108 ಅಂಬುಲೆನ್ಸ್ ವಾಹನದ ಸಿಬ್ಬಂದಿ ವಿಜಯಕುಮಾರ ಲಿಂಗದಳ್ಳಿ.
ಬಿ.ಎಸ್ಸಿ ನರ್ಸಿಂಗ್ ಪದವಿ ನಂತರ ಆರು ವರ್ಷದ ಹಿಂದೆ ಸ್ಟಾಫ್ ನರ್ಸ್ (ಇ.ಎಂ.ಟಿ) ಸೇವೆಗೆ ಸೇರಿದ ಇವರು ಹೂವಿನಹಿಪ್ಪರಗಿ, ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ.
ರೋಗಿಗಳನ್ನು ಆಸ್ಪತ್ರೆಗೆ ಕರೆ ತರುವ ಕುರಿತು ಕರೆ ಬರುತ್ತಿದ್ದಂತೆ ಅಂಬುಲೆನ್ಸ್ ನಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳೊಂದಿಗೆ ರೋಗಿಯ ಮನೆಯ ಬಾಗಿಲಿಗೆ ತೆರಳಿ ಅವರಿಗೆ ವೈದ್ಯರ ಮಾರ್ಗದರ್ಶನದಂತೆ ಪ್ರಾಥಮಿಕ ಚಿಕಿತ್ಸೆ ನೀಡುತ್ತಲೇ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ.
ಕೋವಿಡ್ ರೋಗ ಉಲ್ಬಣಿಸುತ್ತಿದ್ದಂತೆ ಮೊದಲಿಗಿಂತಲೂ ಕೆಲಸದ ಒತ್ತಡ ಹೆಚ್ಚಾಗಿದ್ದರೂ ರೋಗಿಗಳ ಸೇವೆ ಮಾಡುತ್ತಿರುವ ಸಂತೃಪ್ತಿ ಇದೆ. ನಾವು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದ ಮನೆಗೆ ತೆರಳಿದರೂ ಕುಟುಂಬ ಸದಸ್ಯರಿಂದ ಅಂತರ ಕಾಯ್ದುಕೊಂಡು ನನ್ನ ಕೆಲಸಗಳನ್ನು ನಾನೇಮಾಡಿಕೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ ಎನ್ನುತ್ತಾರೆ ವಿಜಯಕುಮಾರ.
ಕೋವಿಡ್ಬಗ್ಗೆ ಭಯ ಪಡದೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ರೋಗ ಲಕ್ಷಣ ಕಂಡು ಬಂದಾಗ ತಕ್ಷಣ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬೇಕು. ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸದೇ ಅವರನ್ನು ಗೌರವದಿಂದ ಕಾಣಬೇಕು.
–ನಿರೂಪಣೆ: ಪ್ರಕಾಶ ಮಸಬಿನಾಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.