ADVERTISEMENT

ಹೊಸಪೇಟೆ: ಬಿಜೆಪಿ ಮುಖಂಡರ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 11:15 IST
Last Updated 10 ಜೂನ್ 2022, 11:15 IST
   

ಹೊಸಪೇಟೆ (ವಿಜಯನಗರ): ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿಯ ನೂಪುರ್‌ ಶರ್ಮಾ, ನವೀನ್‌ ಜಿಂದಾಲ್‌ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಸೋಷಿಯಲ್‌ ಡೆಮೊಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ) ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರಕರಣದ ಕಾವು ಪಡೆಯುತ್ತಿದ್ದಂತೆ ಬಿಜೆಪಿಯು ನೂಪುರ್‌ ಶರ್ಮಾ ಅವರನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ನವೀನ್‌ ಜಿಂದಾಲ್‌ ಅವರನ್ನು ಮಾಧ್ಯಮ ಉಸ್ತುವಾರಿ ಸ್ಥಾನದಿಂದ ತೆಗೆದು ಹಾಕಿದೆ. ಪ್ರವಾದಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಇಬ್ಬರನ್ನು ಬಂಧಿಸಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ದೇಶದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರು, ಪರಿಶಿಷ್ಟರ ವಿರುದ್ಧ ಕೆಲಸಗಳು ನಡೆಯುತ್ತಿವೆ. ಸಂಘ ಪರಿವಾರದವರು ದೇಶದಾದ್ಯಂತ ಮುಸ್ಲಿಂ ವಿರೋಧಿ ಕೃತ್ಯಗಳನ್ನು ಎಸಗುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಮೌನ ವಹಿಸುವುದರ ಮೂಲಕ ನೆರವು ನೀಡುತ್ತಿದೆ. ಬಿಜೆಪಿ ಹಾಗೂ ಇತರೆ ಸಂಘಟನೆಗಳ ನಾಯಕರು ಸಾರ್ವಜನಿಕವಾಗಿ ದ್ವೇಷ ಭಾಷಣಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ADVERTISEMENT

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ವಲಿ ಬಾಷಾ, ಜಿಲ್ಲಾ ಉಪಾಧ್ಯಕ್ಷ ನಜೀರ್‌ ಖಾನ್‌, ಪ್ರಧಾನ ಕಾರ್ಯದರ್ಶಿ ಹಬೀಬ್‌, ಕಾರ್ಯದರ್ಶಿ ಇರ್ಫಾನ್‌ ಕಟಗಿ, ಕೋಶಾಧಿಕಾರಿ ಶೋಯೆಬ್, ರಫೀಕ್‌, ಇಬ್ರಾಹಿಂ, ಸಲಿಂ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.