ಆಲಮಟ್ಟಿ: ‘ಶತಮಾನಗಳಿಂದಲೂ ಜಾತಿ, ಲಿಂಗ ತಾರತಮ್ಯವಿಲ್ಲದೇ ಅನ್ನ, ಶಿಕ್ಷಣದ ದಾಸೋಹವನ್ನೇ ಉಸಿರಾಗಿಸಿಕೊಂಡು ಮಾನವೀಯ ಧರ್ಮವನ್ನು ಬೋಧಿಸುವ ಪರಂಪರೆಯನ್ನು ರಾಜ್ಯದ ಬೀದರನಿಂದ ಸುತ್ತೂರುವರೆಗೂ ಕೇವಲ ವೀರಶೈವ ಲಿಂಗಾಯತ ಮಠಗಳಲ್ಲಿ ಮಾತ್ರ ಕಾಣಬಹುದು’ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ಚಿಮ್ಮಲಗಿ ಭಾಗ-2 ಗ್ರಾಮದಲ್ಲಿ ಶನಿವಾರ ಜರುಗಿದ, ಚಿಮ್ಮಲಗಿ, ಅರಳೆಲೆ ಕಟ್ಟಿಮನಿ ಹಿರೇಮಠದ ನೀಲಕಂಠ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಜರುಗಿದ ಸರ್ವಧರ್ಮ ಸಾಮೂಹಿಕ ವಿವಾಹ, ಧರ್ಮ ಸಮ್ಮೇಳನ, ಪೀಠಾಧಿಕಾರಿ ಸಿದ್ಧರೇಣುಕ ಸ್ವಾಮೀಜಿಗಳ 33 ದಿನಗಳ ಮೌನಾನುಷ್ಠಾನದ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವೀರಶೈವ ಲಿಂಗಾಯತ ಧರ್ಮ ಎಂದಿಗೂ ಜಾತಿಯ ವಿಷ ಬೀಜ ಬಿತ್ತಲಿಲ್ಲ. ಕೇವಲ ಮಾನವೀಯ ಧರ್ಮವನ್ನು ಬಿತ್ತಿದವು. ಮೈಸೂರು ಮಹಾರಾಜರು ಸುತ್ತೂರು ಮಠವನ್ನು ಎಂದಿಗೂ ಕೈಬಿಡಲಿಲ್ಲ, ಜಿಲ್ಲೆಯಲ್ಲಿಯೂ ಬಂಥನಾಳ ಶಿವಯೋಗಿಗಳು ಶಿಕ್ಷಣ ಸಂಸ್ಥೆ ಬೋರ್ಡಿಂಗ್ ಸ್ಥಾಪಿಸಿ ಶಿಕ್ಷಣ ದಾಸೋಹದ ಪರಂಪರೆ ಆರಂಭಿಸಿದರು’ ಎಂದರು.
ಗ್ರಾಮದ ಅಭಿವೃದ್ಧಿಗಾಗಿ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಾಲಹಳ್ಳಿಯ ವಿದ್ಯಮಾನ್ಯ ಶಿವಾಭಿನವ ಜಯಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಭಕ್ತಿ, ಜ್ಞಾನ, ವೈರಾಗ್ಯದ ನೆರಳಲ್ಲಿ ಬಾಳುವ ಭಾರತ ದೇಶದಲ್ಲಿ ತಮ್ಮ ಧರ್ಮವನ್ನು ಆಚರಿಸುವುದರ ಜತೆಗೆ ಎಲ್ಲಾ ಧರ್ಮಗಳನ್ನು ಗೌರವಿಸುವ, ಬೆಳೆಸುವ ಪರಂಪರೆಯಿದೆ’ ಎಂದರು.
ಕಾರ್ಯಕ್ರಮದ ನೇತೃತ್ವವನ್ನು ಮಠದ ಪೀಠಾಧಿಪತಿ ಸಿದ್ಧರೇಣುಕ ಸ್ವಾಮೀಜಿ ವಹಿಸಿದ್ದು, ಬಸವನಬಾಗೇವಾಡಿಯ ಶಿವಪ್ರಕಾಶ ಸ್ವಾಮೀಜಿ, ಗುಂಡಕನಾಳದ ಗುರುಲಿಂಗ ಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಸ್ವಾಮೀಜಿ, ಕನ್ನೂರಿನ ಸೋಮನಾಥ ಸ್ವಾಮೀಜಿ, ಮುತ್ತತ್ತಿಯ ಗುರುಲಿಂಗ ಸ್ವಾಮೀಜಿ, ಬಿಲ್ಕೆರೂರಿನ ಸಿದ್ಧಲಿಂಗ ಸ್ವಾಮೀಜಿ, ಮನಗೂಳಿಯ ಸಂಗನಬಸವ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಇದ್ದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಎಸ್.ಜಿ. ನಾಗಠಾಣ, ಸಂಗು ಬಳಿಗಾರ, ವಿಜಯಕುಮಾರ ವಾರದ, ಬಸವರಾಜ ಸೋಂಪುರ, ರಾಮನಗೌಡ ಪಾಟೀಲ ಹೆಬ್ಬಾಳ, ಮಲ್ಲು ಪವಾರ ಇದ್ದರು.
ಸಾಮೂಹಿಕ ವಿವಾಹದಲ್ಲಿ ನಾಲ್ಕು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಕ್ಕೂ ಮೊದಲು ಮಠದ ಪೀಠಾಧಿಪತಿ ಸಿದ್ಧರೇಣುಕ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.