ವಿಜಯಪುರ: ಬೆಳಗಾವಿಯ ಜಿಮ್ಖಾನ ಮೈದಾನದಲ್ಲಿ ಐಪಿಎಲ್ ಮಾದರಿಯಲ್ಲಿ ನಡೆದ 14 ವರ್ಷದೊಳಗಿನವರ ‘ವಿಜೇತಾ’ ಕ್ರಿಕೆಟ್ ಟ್ರೋಪಿಯಲ್ಲಿ ಹನಿ ಡಾಟ್ ತಂಡವನ್ನು ಪ್ರತಿನಿಧಿಸಿದ್ದ ವಿಜಯಪುರ ನಗರದ ಸನ್ ಜೋಸೆಪ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಎಸ್.ಚವ್ಹಾಣ ಬ್ಯಾಟಿಂಗ್ ಮತ್ತು ಕೀಪಿಂಗ್ ವಿಭಾಗದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿ, ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಟೂರ್ನಮೆಂಟ್ನಲ್ಲಿ ಐದು ಪಂದ್ಯಗಳನ್ನು ಆಡಿದ ಶ್ರೇಯಾ ಒಟ್ಟು 268 ರನ್ ಗಳಿಸಿ ಉತ್ತಮ ಬ್ಯಾಟ್ಸ್ ವುಮೆನ್, ಇಂಪ್ಯಾಕ್ಟ್ ಪ್ಲೇಯರ್ ಅವಾರ್ಡ್, ಮೋಸ್ಟ್ ಬೌಂಡರಿ ಅವಾರ್ಡ್ ಕೀರ್ತಿಗೆ ಭಾಜನರಾಗಿದ್ದಾರೆ.
ವಿಕೇಟ್ ಕೀಪರ್ ಆಗಿಯೂ ಉತ್ತಮ ಸಾಧನೆ ತೋರಿರುವ ಶ್ರೇಯಾ ಒಟ್ಟು 10 ಸ್ಟಂಪ್ ಔಟ್ ಮಾಡುವ ಮೂಲಕ ಟೂರ್ನಮೆಂಟ್ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ವಿಜಯಪುರ ನಗರದ ಓಂ ಕ್ರಿಕೆಟ್ ಅಕಾಡೆಮಿಯ ತರಬೇತುದಾರ ಮುರಳಿ ಬೀಳಗಿ, ಬಿಜಾಪುರ ಬುಲ್ಸ್ ಮ್ಯಾನೇಜರ್ ರಾಜೇಶ ತೊರವಿ ಹಾಗೂ ರಾಜು ನಾಗನಂದ ಅವರ ಬಳಿ ತರಬೇತಿ ಪಡೆಯುತ್ತಿರುವ ಶ್ರೇಯಾ ಭವಿಷ್ಯದ ಭರವಸೆಯ ಕ್ರಿಕೆಟ್ ಪಟುವಾಗಿ ಹೊರಹೊಮ್ಮಿದ್ದಾರೆ.
ನೈರುತ್ಯ ರೈಲ್ವೆ ವಿಜಯಪುರದಲ್ಲಿ ರೈಲ್ವೆ ಎಂಜಿನಿಯರ್ ಆಗಿರುವ ಸಂತೋಷಕುಮಾರ ಚವ್ಹಾಣ ಅವರ ಪುತ್ರಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.