ADVERTISEMENT

ಸಿಂದಗಿ: ಬಿಜೆಪಿ ರೈತ ಮೋರ್ಚಾದಿಂದ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 6:42 IST
Last Updated 15 ಅಕ್ಟೋಬರ್ 2025, 6:42 IST
ಸಿಂದಗಿ ಪಟ್ಟಣದ ತಾಲ್ಲೂಕು ಪ್ರಜಾಸೌಧ ಆವರಣದಲ್ಲಿ ಮಂಗಳವಾರ ಬಿಜೆಪಿ ಮಂಡಲ ರೈತ ಮೋರ್ಚಾ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು
ಸಿಂದಗಿ ಪಟ್ಟಣದ ತಾಲ್ಲೂಕು ಪ್ರಜಾಸೌಧ ಆವರಣದಲ್ಲಿ ಮಂಗಳವಾರ ಬಿಜೆಪಿ ಮಂಡಲ ರೈತ ಮೋರ್ಚಾ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು   

ಸಿಂದಗಿ: ಆರು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬಿಜೆಪಿ ಮಂಡಲ ರೈತ ಮೋರ್ಚಾ ನೇತೃತ್ವದಲ್ಲಿ ಪಟ್ಟಣದ ತಾಲ್ಲೂಕು ಪ್ರಜಾಸೌಧದ ಆವರಣದಲ್ಲಿ ಮಂಗಳವಾರ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಗೊಂಡಿತು.

ವಿವಿಧ ಗ್ರಾಮಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ರೈತರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ‘ನನ್ನ 45 ವರ್ಷದ ರಾಜಕೀಯ ಅನುಭವದಲ್ಲಿ ಇಂಥ  ಸರ್ಕಾರ ಕಂಡಿಲ್ಲ. ನೀವೇನಾದರೂ ಹಾಳು ಬಾವಿ ಬೀಳಿ. ಆದರೆ, ರೈತರ ಕಣ್ಣೀರು ಒರೆಸಲು ಮುಂದಾಗಿ’ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಸರ್ಕಾರದ ಬೆಳೆಹಾನಿ ಸಮೀಕ್ಷೆಯ ವರದಿ ತಪ್ಪಾಗಿದೆ. ರೈತರಿಗೆ ಬೆಳೆಹಾನಿಗೆ ಸೂಕ್ತ ಪರಿಹಾರ ಸಿಗುವವರೆಗೂ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. 

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ‘ಕೇಂದ್ರ ಸರ್ಕಾರಕೆ ರಾಜ್ಯ ಸರ್ಕಾರವು ಬೆಳೆಹಾನಿ ಕುರಿತು ನಿಖರ ಮಾಹಿತಿ ಕೊಡುತ್ತಿಲ್ಲ. ಹೀಗಾಗಿ ರೈತರಿಗೆ ಸಿಗಬೇಕಾದ ಬೆಳೆಹಾನಿ ಪರಿಹಾರ ಸಿಗುತ್ತಿಲ್ಲ. ಮಹಾರಾಷ್ಟ್ರ ಸರ್ಕಾರವು ₹31 ಸಾವಿರ ಕೋಟಿ ಬೆಳೆಹಾನಿ ಪರಿಹಾರ ಘೋಷಣೆ ಮಾಡಿದೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿದ್ದು ಕೇವಲ ₹2 ಸಾವಿರ ಕೋಟಿ ಪರಿಹಾರ ಮಾತ್ರ’ ಎಂದು ಟೀಕಿಸಿದರು.

‘ಮತಕ್ಷೇತ್ರದಲ್ಲಿ ರಸ್ತೆಗಳೆಲ್ಲ ಗುಂಡಿಮಯವಾಗಿವೆ. ಇದರಿಂದ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ರೈತರ ಕಷ್ಟಪಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ರಸ್ತೆ ದುರಸ್ತಿ ಮಾಡಲು ಆಗದಿದ್ದರೆ, ಕನಿಷ್ಠಪಕ್ಷ ಗುಂಡಿಗಳನ್ನಾದರೂ ಮುಚ್ಚಿ’ ಎಂದು ಲೇವಡಿ ಮಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ರೈತ ಮೋರ್ಚಾ ಅಧ್ಯಕ್ಷ ಪೀರೂ ಕೆರೂರ, ಬಿಜೆಪಿ ಜಿಲ್ಲಾ ಪ್ರಮುಖರಾದ ಮಲ್ಲನಗೌಡ ಪಾಟೀಲ, ಈರಣ್ಣ ರಾವೂರ ಮಾತನಾಡಿದರು.

ನನ್ನ ಮನೆ ಸಂಪೂರ್ಣವಾಗಿ ಕುಸಿದಿದೆ. ಅದಕ್ಕೆ ಕೇವಲ ₹6 ಸಾವಿರ ಮಾತ್ರ ಪರಿಹಾರ ಜಮೆಯಾಗಿದೆ’ ಎಂದು ಕುಮಸಗಿ ಗ್ರಾಮದ ರೈತ ಅಶೋಕ ಇದೇ ಸಂದರ್ಭದಲ್ಲಿ ಅಳಲು ತೋಡಿಕೊಂಡರು.

‘ಬೆಳೆಹಾನಿ ಸಮೀಕ್ಷೆ ಕೈಗೊಳ್ಳಿ’

‘ಜಾತಿ ಜಾತಿಗಳಲ್ಲಿ ಜಗಳ ಹಚ್ಚುವ ಜಾತಿಗಣತಿ ಸಮೀಕ್ಷೆ ಯಾರಿಗೆ ಬೇಕಾಗಿದೆ? ಮೊದಲು ಇದನ್ನು ನಿಲ್ಲಿಸಿ. ಮೊದಲು ಬೆಳೆಹಾನಿ ಸಮೀಕ್ಷೆ ಕೈಗೆತ್ತಿಕೊಂಡು ಪರಿಹಾರ ಬಿಡುಗಡೆಗೊಳಿಸಿ. ರೈತರ ಕಣ್ಣಲ್ಲಿ ನೀರಲ್ಲ ರಕ್ತ ಬರ್ತಿದೆ ನಿಮ್ಮ ಸರ್ಕಾರ ಸುಡುತ್ತದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿಂದಗಿ– ಆಲಮೇಲ ತಾಲ್ಲೂಕುಗಳಲ್ಲಿ ಶೇ 80ರಷ್ಟು ಬೆಳೆಹಾನಿಯಾಗಿದೆ. ಆದರೆ ಶೇ 20ರಷ್ಟು ಮಾತ್ರ ಬೆಳೆಹಾನಿ ಆಗಿದೆ ಎಂದು ಸಮೀಕ್ಷೆ ಮಾಡಲಾಗಿದೆ. ಸರ್ಕಾರದ ಬೊಕ್ಕಸ ಖಾಲಿಯಾಗಿದ್ದರಿಂದ ಈ ರೀತಿ ಸಮೀಕ್ಷೆ ಮಾಡಲಾಗಿದೆಯೇ?
- ರಮೇಶ ಭೂಸನೂರ, ಮಾಜಿ ಶಾಸಕ ಸಿಂದಗಿ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.