ADVERTISEMENT

ರೈತರಿಗೆ ಹಗಲು 7 ಗಂಟೆ ತ್ರೀಫೇಸ್‌ ವಿದ್ಯುತ್‌ ಶೀಘ್ರ: ಹೆಸ್ಕಾಂ ಅಧ್ಯಕ್ಷ ಸಯ್ಯದ್‌

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:30 IST
Last Updated 26 ಜುಲೈ 2025, 6:30 IST
ಸಯ್ಯದ್‌ ಅಜೀಮಪೀರ ಎಸ್.ಖಾದ್ರಿ
ಸಯ್ಯದ್‌ ಅಜೀಮಪೀರ ಎಸ್.ಖಾದ್ರಿ   

ವಿಜಯಪುರ: ರೈತರ ಬೇಡಿಕೆಯಂತೆ ಗ್ರಾಮೀಣ ಭಾಗದಲ್ಲಿ ಹಗಲು ವೇಳೆಯಲ್ಲಿ 7 ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಕಾರ್ಯಕ್ಕೆ ಈಗಾಗಲೇ ದೊಡ್ಡಬಳ್ಳಾಪುರ, ಗದಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದು, ಶೀಘ್ರದಲ್ಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಸಹ ಸೋಲಾರ್‌ನಿಂದ ಉತ್ಪಾದಿಸಲಾದ ವಿದ್ಯುತ್ ಪಡೆದುಕೊಂಡು ಹಗಲು ವೇಳೆಯಲ್ಲಿ 7 ಗಂಟೆ ವಿದ್ಯುತ್ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಸಯ್ಯದ್‌ ಅಜೀಮಪೀರ ಎಸ್.ಖಾದ್ರಿ ಹೇಳಿದರು. 

ನಗರದ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

2023ನೇ ಸಾಲಿನವರೆಗೆ ₹ 10 ಸಾವಿರ ಹಣ ತುಂಬಿ ಆರ್.ಆರ್.ನಂಬರ್ ಪಡೆದ 15,200 ರೈತರಿಗೆ ಪಂಪಸೆಟ್‍ಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ₹50 ಹಣ ತುಂಬಿ ಆರ್.ಆರ್.ನಂಬರ್ ಪಡೆದ  23 ಸಾವಿರ  ರೈತರಿಗೆ ಐಪಿ ಸೆಟ್ ಕಲ್ಪಿಸುವ ಟೆಂಡರ್ ಪ್ರಗತಿಯಲ್ಲಿದೆ ಎಂದರು.

ADVERTISEMENT

ಗೃಹ ಜ್ಯೋತಿ ಸೇರಿದಂತೆ ರೈತರು, ಸಾರ್ವಜನಿಕರಿಗೆ ಸಮರ್ಪಕವಾಗಿ ವಿದ್ಯುತ್ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ವಿಜಯಪುರ ನಗರಕ್ಕೆ ಭೂಗತ ಕೇಬಲ್:

ವಿಜಯಪುರ ನಗರದಲ್ಲಿ ಭೂಗತ ಕೇಬಲ್ ಅಳವಡಿಕೆಗೆ ಇಂಧನ ಇಲಾಖೆಯಿಂದ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.

ಕಳೆದ 20 ರಿಂದ 30 ವರ್ಷ ಹಳೆಯದಾದ ಅಪಾಯಕಾರಿಯಾದ ವಿದ್ಯುತ್ ಕಂಬಗಳು ಮತ್ತು ಟಿಸಿಗಳನ್ನು ತೆರವುಗೊಳಿಸಿ ಬದಲಿ ಕಂಬಗಳನ್ನು ಮತ್ತು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದಲ್ಲಿ ತಕ್ಷಣವೇ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸಿ, ಅಗತ್ಯ ಕ್ರಮ ವಹಿಸಲಿದ್ದಾರೆ ಎಂದು ಅವರು ಹೇಳಿದರು. 

ಸ್ಮಾರ್ಟ್ ಮೀಟರ್ ಅಳವಡಿಕೆಗೆ ಚೆಸ್ಕಾಂ ಹಾಗೂ ಬೆಸ್ಕಾಂನಲ್ಲಿ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಭಾಗದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸುವ ಪ್ರಸ್ತಾವನೆ ಇದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುವುದು ಎಂದರು.

ಹೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ 350 ಲೈನ್‍ಮನ್ ನೇಮಕಾತಿ ಪ್ರಕ್ರಿಯೆಯಲ್ಲಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು. ಮೆರಿಟ್ ಹಾಗೂ ಕೌನ್ಸಿಲಿಂಗ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿ, ನೇಮಕಾತಿಯಾದವರಿಗೆ ಅಗತ್ಯವಿರುವ ಕಡೆ ನಿಯೋಜಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಸಿದ್ಧಪ್ಪ ಬಿಂಜಗೇರಿ ಇದ್ದರು.  

ಸಿಎಂ ಡಿಸಿಎಂ ಇಂಧನ ಸಚಿವರ ಮಾರ್ಗದರ್ಶನದಲ್ಲಿ ಈಗಾಗಲೇ ಇರುವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಸಣ್ಣ ಪುಟ್ಟ ಸಮಸ್ಯೆ ಪರಿಹರಿಸಿ ದೋಷರಹಿತ ಅಪಘಾತ ರಹಿತ ಹೆಸ್ಕಾಂ ಅನ್ನಾಗಿಸಲು ಪ್ರಯತ್ನಿಸಲಾಗುವುದು
–ಸಯ್ಯದ್‌ ಅಜೀಮಪೀರ ಎಸ್.ಖಾದ್ರಿ ಅಧ್ಯಕ್ಷ ಹೆಸ್ಕಾಂ
ನಿಯಮಬಾಹಿರ ಬಡ್ತಿ: ಶಿಸ್ತು ಕ್ರಮದ ಭರವಸೆ
ವಿಜಯಪುರ: 2015 2018 ಮತ್ತು 2020ರಲ್ಲಿ ಕಿರಿಯ ಎಂಜಿನಿಯರ್‌ ಹುದ್ದೆಗೆ ನಿಯಮ ಬಾಹಿರವಾಗಿ ಪದೋನ್ನತಿ ನೀಡಿರುವ ಪ್ರಕರಣದ ತನಿಖಾ ವರದಿಯನ್ನು ಪರಿಶೀಲಿಸಿ ಇಂಧನ ಸಚಿವರೊಂದಿಗೆ ಚರ್ಚಿಸಿ ತಪ್ಪಿತ್ಥರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಹೆಸ್ಕಾಂ ಅಧ್ಯಕ್ಷ ಸಯ್ಯದ್‌ ಅಜೀಮಪೀರ ಎಸ್.ಖಾದ್ರಿ ಭರವಸೆ ನೀಡಿದರು. ಕಿರಿಯ ಎಂಜಿನಿಯರ್‌ ಹುದ್ದೆಗಳಿಗೆ ನಿಯಮ ಬಾಹಿರವಾಗಿ ಪದೋನ್ನತಿ ನೀಡಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ವರದಿಯನ್ನು ಪಡೆದು ಶೀಘ್ರಕ್ರಮಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.