ವಿಜಯಪುರ:ಸರ್ಕಾರದ ವಿವಿಧ ಯೋಜನೆಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಒಂದೇ ಸೂರಿನಡಿ ಎಲ್ಲ ಯೋಜನೆಗಳು ಸಿಗುವಂತೆ ಮಾಡುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಶಾಸಕ ಬಸನಗೌಡಪಾಟೀಲ ಯತ್ನಾಳ ಎಂದರು.
ನಗರದ ಅಟಲ್ಬಿಹಾರಿ ವಾಜಪೇಯಿ ರಸ್ತೆಯ ರಜಪೂತ ಗಲ್ಲಿಯಲ್ಲಿ ಆದಿಜಾಂಬವ ಮಾದಿಗ ದಂಡೋರ ಸಮಾಜ ಸೇವಾ ಸಂಘ ಉಟ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಕೇವಲ ₹38,042 ಅನ್ನು ಮಾತ್ರ ವಂತಿಗೆ ಹಣ ತುಂಬಿ ಮನೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ದೇಶಕ್ಕೆಅಂಬೇಡ್ಕರ್ ಕೊಡುಗೆ ಅಪಾರವಾಗಿದ್ದು, ಅವರ ಜೀವನ ಚರಿತ್ರೆ ತಿಳಿಯುವುದು ಅವಶ್ಯವಾಗಿದೆ ಎಂದರು.
ನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವನ್ನು ಹೊಸದಾಗಿ ವಿನ್ಯಾಸಗೊಳಿಸಿ, ಹೊಸ ಮೂರ್ತಿ ಸ್ಥಾಪನೆ ಮಾಡಲಾಗುವುದು, ಈಗಿರುವ ಮೂರ್ತಿಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಥಾಪಿಸಲಾಗುವುದು. ಅಂಬೇಡ್ಕರ್ ವೃತ್ತದಿಂದ ಗೋಳಗುಮ್ಮಟ ಮೂಲಕ ರಾಷ್ಟ್ರೀಯ ಹೆದ್ದಾರಿ 50ರ ಫ್ಲೈ ಒವರ್ ವರೆಗೆ (ಹಳೇ ರೈಲ್ವೆ ಸ್ಟೇಷನ್ ವರೆಗೆ) ರಸ್ತೆಗೆ ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಾರ್ಗ ಎಂದು ನಾಮಕರಣ ಮಾಡಲಾಗುವುದು ಎಂದು ಹೇಳಿದರು.
ಆದಿ ಜಾಂಬವ ಸಮುದಾಯದ ಸಲುವಾಗಿ ಆದಿ ಜಾಂಬವ ಅಭಿವೃದ್ಧಿ ನಿಗಮದಡಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಮಾಜವರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆದಿಜಾಂಬವ ಮಾದಿಗ ದಂಡೋರ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತ ಸೊನ್ನದ, ಉಪಾಧ್ಯಕ್ಷ ಅಶೋಕ ತಳಕೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಲಕ್ಷ್ಮಣ ಜಾಧವ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾನಂದ ಬಿರಾದಾರ, ಅಶೋಕ ಬೆಲ್ಲದ, ರಾಜು ಕುರಿಯವರ, ಸಂತೋಷ ತಳಕೇರಿ, ಬಾಗಪ್ಪ ಕನ್ನೊಳ್ಳಿ, ರಮೇಶ ಪಡಸಲಗಿ, ಪ್ರಕಾಶ ಚವ್ಹಾಣ, ದತ್ತಾ ಗೊಲಾಂಡೆ, ಮಧು ಕಲಾದಗಿ, ಪಿಂಟು ಚೊರಗೆ, ರಂಗಪ್ಪ ಬೇವಿನಮರದ, ಪರಶುರಾಮ ಕಟ್ಟಿಮನಿ, ಮನೋಹರ ಕಾಂಬ್ಳೆ, ಶರಣು ಕಾಖಂಡಕಿ, ಉಮೇಶ ವೀರಕರ, ಶಶಿಕಾಂತ ಹಲಗಣಿ ಉಪಸ್ಥಿತರಿದ್ದರು.
***
ಪ್ರತಿಯೊಂದು ವರ್ಗದವರ ದ್ವನಿಯಾಗಿದ್ದಡಾ.ಬಿ.ಆರ್.ಅಂಬೇಡ್ಕರ್ ಎಲ್ಲ ಸಮುದಾಯದ ಜನರಿಗೆ ಅವರು ಮಹಾನ್ ನಾಯಕರಾಗಿದ್ದಾರೆ
-ಬಸನಗೌಡ ಪಾಟೀಲ ಯತ್ನಾಳ,ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.