ADVERTISEMENT

ಸಕ್ಕರೆ ಕಾರ್ಖಾನೆ | 2 ದಿನದಲ್ಲಿ ಕಾರ್ಯಾರಂಭಿಸಿ: ಜಿಲ್ಲಾಧಿಕಾರಿ ಡಾ.ಆನಂದ

ಕಾರ್ಖಾನೆ ಮಾಲೀಕರು, ರೈತರೊಂದಿಗೆ ಏರ್ಪಡಿಸಿದ್ದ ಸಭೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 6:20 IST
Last Updated 4 ನವೆಂಬರ್ 2025, 6:20 IST
ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಹಾಗೂ ರೈತರು
ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಹಾಗೂ ರೈತರು   

ವಿಜಯಪುರ: ‘ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು ಎರಡು ದಿನಗಳಲ್ಲಿ ಕಬ್ಬಿನ ಸಾಗಾಣಿಕೆ ಮತ್ತು ಕಟಾವು ದರ(ಎಚ್‌ ಅಂಡ್‌ ಟಿ) ವನ್ನು ಹೊರತುಪಡಿಸಿ ರೈತರಿಗೆ ಪಾವತಿಸಬೇಕಾಗುವ ದರವನ್ನು ನಿಗದಿಗೊಳಿಸಿ, ಕಬ್ಬು ನುರಿಸುವ ಕಾರ್ಯಾರಂಭಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 10 ಸಕ್ಕರೆ ಕಾರ್ಖಾನೆಗಳಿದ್ದು, ಕೇವಲ ಒಂದು  ಕಾರ್ಖಾನೆ ಮಾತ್ರ ದರ ನಿಗದಿಪಡಿಸಿದ್ದು, ಇನ್ನುಳಿದ ಕಾರ್ಖಾನೆಗಳು ಆದಷ್ಟು ಬೇಗ ಸಮರ್ಪಕ ದರ ನಿಗದಿಪಡಿಸಿ ಸಕ್ಕರೆ ಕಾರ್ಖಾನೆಗಳನ್ನು ಕಾರ್ಯಾರಂಭಿಸುವಂತೆ ಸೂಚಿಸಿದರು.

ADVERTISEMENT

ರೈತರಿಗೆ ಪಾವತಿಯಾಗಬೇಕಾದ ಈ ಹಿಂದಿನ ಯಾವುದೇ ಬಿಲ್ಲಗಳನ್ನು ಬಾಕಿ ಉಳಿಸಿಕೊಳ್ಳದೇ ಶೀಘ್ರವಾಗಿ ಇತ್ಯರ್ಥಪಡಿಸಿ ಪಾವತಿಗೆ ಕ್ರಮವಹಿಸಬೇಕು. ಈ ಹಂಗಾಮಿನಲ್ಲಿ ಸರ್ಕಾರದ ಮಾನದಂಡವನ್ನು ಬಳಸಿಕೊಂಡು ತಮ್ಮ ಅಧಿಕೃತ ಕಾರ್ಖಾನೆಯ ಲೆಟರ್ ಹೆಡ್‍ನಲ್ಲಿ ಕಬ್ಬು ನುರಿಸುವ ಕುರಿತು ಪತ್ರ ನೀಡಿ ಕಾರ್ಖಾನೆಗಳನ್ನು ಆರಂಭಿಸುವಂತೆ ಅವರು ಸೂಚನೆ ನೀಡಿದರು.

‘ರೈತ ಮುಖಂಡರು ತಮ್ಮ ಸಮಸ್ಯೆಗಳ ಕುರಿತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಬಹುತೇಕ ಸ್ಥಳೀಯವಾಗಿರುವ ಸಮಸ್ಯೆ ಪರಿಹರಿಸಲಾಗುವುದು. ವಾಯು ಮಾಲಿನ್ಯ, ನೈರ್ಮಲ್ಯ ಪರಿಶೀಲನೆ ನಡೆಸಿದ ವರದಿ ಸಲ್ಲಿಸಿ, ಸಕ್ಕರೆ ಕಾರ್ಖಾನೆಗಳು ಕೊಳಚೆ ನೀರು ಹರಿಬಿಡದಂತೆ ನೋಡಿಕೊಂಡು ಮಾಲಿನ್ಯವಾಗದಂತೆ ನಿಗಾವಹಿಸಬೇಕು’ ಎಂದರು.

ರೈತರು ಕಬ್ಬು ಪೂರೈಸಿದ ನಿಗದಿತ ಕಾಲಾವಧಿಯೊಳಗೆ ರೈತರಿಗೆ ಕಬ್ಬಿನ ಬಿಲ್‌ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ಪ್ರತಿ ದಿನ ಕಾರ್ಖಾನೆಗೆ ಬರುವ ಕಬ್ಬು ತುಂಬಿದ ವಾಹನಗಳ ಕುರಿತ ಮಾಹಿತಿ ಲಾಗ್ ಬುಕ್‍ನಲ್ಲಿ ದಾಖಲಿಸಬೇಕು. ಕಬ್ಬಿನ ಕಾಸ್ಟ್ ಆಪ್ ಕಲ್ಟಿವೇಶನ್ ಲಾಭಾಂಶ ಕುರಿತು 15 ಅಂಶಗಳ ಕಬ್ಬಿನ ದರ ನಿಗದಿ ಪಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಕಾರ್ಖಾನೆಗಳ ಮಾಲೀಕರು ಒಂದು ನಿಖರತೆಯಿಂದ ದರ ನಿಗದಿಪಡಿಸಿ ಘೋಷಿಸಿ ಕಾರ್ಖಾನೆ ಆರಂಭಿಸಬೇಕು ಎಂದರು. ವಿವಿಧ ರೈತ ಮುಖಂಡರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಹಾಗೂ ಅನುರಾಧಾ ವಸ್ತ್ರದ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಖಾನೆಗಳ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ನಿಯಮಾನುಸಾರ ಕ್ರಮವಹಿಸಿ: ಡಿ.ಸಿ

‘ಸಕ್ಕರೆ ಕಾರ್ಖಾನೆಗಳಲ್ಲಿ ತೂಕ ಮಾಪನದಲ್ಲಿ ಯಾವುದೇ ದೂರಿಗೆ ಆಸ್ಪದ ನೀಡದಂತೆ ನಿಯಮಾನುಸಾರ ಕ್ರಮವಹಿಸಬೇಕು. ಎಲ್ಲಾ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಿರಬೇಕು ಸಕ್ಕರೆ ಕಾರ್ಖಾನೆಗಳು ಅಳವಡಿಸಿಕೊಂಡಿರುವ ಡಿಜಿಟಲ್ ತೂಕ ಯಂತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತಾಗಿ ಆಹಾರ ಇಲಾಖೆ ಕಂದಾಯ ಇಲಾಖೆ ಹಾಗೂ ಇಬ್ಬರು ರೈತರನ್ನೊಳಗೊಂಡು ಸಮಿತಿ ರಚಿಸಲಾಗಿದೆ. ಸಮಿತಿಯು ಪ್ರತಿ 15 ದಿನಕ್ಕೊಮ್ಮೆ ಜಿಲ್ಲೆಯ ಎಲ್ಲಾ ಕಾರ್ಖಾನೆಗಳಿಗೆ ತೆರಳಿ  ಪರಿಶೀಲನೆ ನಡೆಸಬೇಕು. ಪರಿಶೀಲನಾ ಸಮಗ್ರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಿದೆ. ತೂಕದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಅಂತಹ ಕಾರ್ಖಾನೆಗಳ ವಿರುದ್ಧ ಕಾನೂನಿನ ಕ್ರಮವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.