
ಚಡಚಣ: ತಾಲ್ಲೂಕಿನ ಮರಗೂರ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹಾವಿನಾಳ ದತ್ತ ಇಂಡಿಯನ್ ಸಕ್ಕರೆ ಕಾರ್ಖಾನೆಗಳ ಮೇಲೆ ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ನೇತೃತ್ವದ ತಂಡ ಭೇಟಿ ಮಂಗಳವಾರ ದಾಳಿ ನಡೆಸಿ ತೂಕ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ, ರೈತರ ಸಮ್ಮುಖದಲ್ಲಿ ಎರಡು ಸಕ್ಕರೆ ಕಾರ್ಖಾನೆ ತೂಕ ಮತ್ತು ರಿಕವರ ಪರಿಶೀಲನೆ ಮಾಡಿದಾಗ ಯಾವುದೇ ರೀತಿಯಾದ ಮೋಸ ಕಂಡು ಬರಲಿಲ್ಲ. ಮುಂದಿನ ದಿನದಲ್ಲಿ ಕಾರ್ಖಾನೆಗಳು ಸರಿಯಾದ ದಾಖಲೆ ಮಾಹಿತಿ ಒದಗಿಸಲು ಕ್ರಮ ವಹಿಸಬೇಕು. ಕಾರ್ಖಾನೆಗೆ ಅಧಿಕಾರಿಗಳು, ರೈತರು ಬಂದಾಗ ಸಿಬ್ಬಂದಿ ಮಾಹಿತಿ ಒದಗಿಸಬೇಕು ಮತ್ತು ಸಹಕಾರದಿಂದ ನಡೆದುಕೊಳ್ಳಬೇಕು ಎಂದರು.
ರೈತರು ಸಕ್ಕರೆ ಕಾರ್ಖಾನೆಗೆ ಕಬ್ಬು ಕಳುಹಿಸಿದ 15 ದಿನದೊಳಗೆ ರೈತರ ಖಾತೆಗೆ ಹಣ ಪಾವತಿ ಮಾಡಲು ಕಾರ್ಖಾನೆಗಳು ಕಟ್ಟು ನಿಟ್ಟಿನ ಕ್ರಮವಹಿಸಬೇಕು ಎಂದೂ ಅವರು ಸೂಚನೆ ನೀಡಿದರು.
ತಹಶೀಲ್ದಾರ ಸಂಜಯ ಇಂಗಳೆ ಮಾತನಾಡಿ, ಮುಂದಿನ ದಿನದಲ್ಲಿ ಕಾರ್ಖಾನೆಗಳ ಮೇಲೆ ಆಗಾಗ ಭೇಟಿ ನೀಡಿ ತೂಕ, ರಿಕವರ, ದಾಖಲೆಗಳ ಪರಿಶೀಲನೆ ಮಾಡಲಾಗುವುದು. ದೈನಂದಿನ ದಾಖಲೆಗಳು ಶಿಸ್ತಿನಿಂದ ಪಾಲನೆ ಮಾಡಬೇಕು ಎಂದರು.
ಸಕ್ಕರೆ ಕಾರ್ಖಾನೆ ಸಿಬ್ಬಂದಿ ದೈನಂದಿನ ದಾಖಲೆಗಳನ್ನು ಸರಿಯಾಗಿ ಅನುಸರಿಸಬೇಕು ಎಂದು ರೈತ ಮುಖಂಡ ವಸಂತ ಭೈರಮಡಿ ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ದಾನಪ್ಪ ಕತ್ನಳ್ಳಿ, ಅಬಕಾರಿ ನಿರೀಕ್ಷಕ ರಾಹುಲ ನಾಯಕ, ಝಳಕಿ ಠಾಣೆ ಪಿಎಸ್ಐ ಮಂಜುನಾಥ ತಿರಕನವರ, ಆಹಾರ ನಿರೀಕ್ಷಕ ಶಿವಾನಂದ ಕೋಳಿ, ದಯಾನಂದ ಚೌಗುಲೆ, ರೇಣುಕಾ ಪಟ್ಟಣ್ನಶೆಟ್ಟಿ, ಗುರುಶಾಂತ ಬಿರಾದಾರ, ವಿಠ್ಠಲ ಕೋಳಿ, ಕಾರ್ಖಾನೆ ಸಿಬ್ಬಂದಿ ಇದ್ದರು.
ಎರಡೂ ಕಾರ್ಖಾನೆಗಳಲ್ಲಿ ಸರಾಸರಿ ರಿಕವರ 9.70 ಕಂಡು ಬಂದಿದೆ. ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಕಳೆದ ವರ್ಷ ಒಟ್ಟು 3,27.452 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ, ಈ ವರ್ಷ ಭಾನುವಾರದವರೆಗೆ 1,99,098 ಮೆಟ್ರಿಕ್ ಟನ್ ಕಬ್ಬು ನುರಿಸಿದೆ.