ವಿಜಯಪುರ: ‘ಗಾಯ, ಶಸ್ತ್ರಚಿಕಿತ್ಸೆಯಿಂದಾಗುವ ಕಲೆಗಳನ್ನು ಸರಿಪಡಿಸಲು ಮತ್ತು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸಲು ಪ್ಲಾಸ್ಟಿಕ್ ಸರ್ಜರಿ ವರದಾನವಾಗಿದೆ’ ಎಂದು ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಹೇಳಿದ್ದಾರೆ.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ.ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಹಿಂದೆ ಮನುಷ್ಯನ ಮುಖಚರ್ಯೆ, ಅಂಗವಿಕಲತೆ ಸೇರಿದಂತೆ ನಾನಾ ವಿಕಲತೆಗಳನ್ನು ಸರಿಪಡಿಸುವುದು ಕಷ್ಟಸಾಧ್ಯವಾಗಿತ್ತು. ಆದರೆ, ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯಿಂದಾಗಿ ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ’ ಎಂದರು.
‘ಅಪಘಾತ, ಸುಟ್ಟಗಾಯ, ಸೀಳುತುಟಿ, ಜನ್ಮದೋಷ, ಅಂಗವಿಕಲತೆ, ಹೆಚ್ಚವರಿ ಬೆರಳುಗಳನ್ನು ಸರಿಪಡಿಸುವುದು. ದೇಹ ಮತ್ತು ಮುಖದ ಆಕಾರವನ್ನು ಬದಲಿಸುವುದು, ಸುಕ್ಕುಗಳನ್ನು ಕಡಿಮೆ ಮಾಡಿ ಚರ್ಮದ ಕಾಂತಿ ಹೆಚ್ಚಿಸುವುದು ಈಗ ಸರಳವಾಗಿದೆ. ವಿಕಾರ ರೂಪವನ್ನು ಸುಂದರವಾಗಿ ಮಾರ್ಪಡಿಸಬಹುದಾಗಿದೆ. ಅಲ್ಲದೆ, ಪ್ಲಾಸ್ಟಿಕ್ ಸರ್ಜರಿ ಈಗ ಅತೀ ವೇಗವಾಗಿ ಮುನ್ನುಗ್ಗುತ್ತಿದೆ’ ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಮಾತನಾಡಿ, ‘ಬಿ.ಎಂ.ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬಡವರ ಪಾಲಿಗೆ ಸಂಜೀವಿನಿಯಾಗಿದೆ. ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರಿಗೆ ನೇರವಾಗುತ್ತಿದೆ’ ಎಂದು ಹೇಳಿದರು.
ಪ್ಲಾಸ್ಟಿಕ್ ಸರ್ಜನ ಡಾ. ವಿಜಯಕುಮಾರ ಹುಡೇದ ಮಾತನಾಡಿ, ‘ಪ್ಲಾಸ್ಟಿಕ್ ಸರ್ಜರಿ ದುಬಾರಿ ಎಂಬ ತಪ್ಪು ಗ್ರಹಿಕೆಯಿಂದ ಎಲ್ಲರೂ ಹೊರ ಬರಬೇಕಿದೆ. ಮಹಾನಗರಗಳಿಗೆ ಹೋಲಿಸಿದರೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಕಡಿಮೆ ಇದೆ. ನಮ್ಮಲ್ಲಿ ಸರಾಸರಿ ಪ್ರತಿದಿನ ಎರಡರಂತೆ ಪ್ಲಾಸ್ಟಿಕ್ ಸರ್ಜರಿಗಳು ನಡೆಯುತ್ತಿವೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಹೇಳಿದರು.
ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ. ಮಂಜುನಾಥ ಕೋಟೆಣ್ಣವರ, ಪ್ಲಾಸ್ಟಿಕ್ ಸರ್ಜನ ಡಾ. ಅನಿಕೇತ ವಲ್ಲಭ, ಹೃದ್ರೋಗ ತಜ್ಞ ಡಾ. ಸಂಜೀವ ಸಜ್ಜನರ, ಮೂತ್ರಪಿಂಡ ವಿಭಾಗದ ಡಾ. ಸಂದೀಪ ಪಾಟೀಲ, ಆಸ್ಪತ್ರೆಯ ಸಹ ಆಡಳಿತಾಧಿಕಾರಿ ಶಾಂತೇಶ ಸಲಗರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.