ವಿಜಯಪುರ: ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ಎಂಬ ಏಕತ್ವದ ಸಿದ್ಧಾಂತವು ಭಾರತೀಯ ಆಧ್ಯಾತ್ಮಿಕತೆ, ಯೋಗ ಮತ್ತು ಧ್ಯಾನದ ಮೇಲೆ ಗಾಢವಾದ ಪ್ರಭಾವ ಬೀರಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ನಡೆದ ಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂದಕಾರದಲ್ಲಿದ್ದ ಸಮಾಜಕ್ಕೆ ಸನ್ಮಾರ್ಗ ತೊರಿಸುವ ಕಾರ್ಯವನ್ನು ಶಂಕರಾಚಾರ್ಯರು ಮಾಡಿದರು. ಅದ್ವೈತ ಸಿದ್ಧಾಂತವನ್ನು ಮನುಕುಲದ ಉದ್ದಾರಕ್ಕೆ ಪ್ರತಿಪಾದಿಸಿದರು. ಅವರ ಆದರ್ಶ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯಗಳಾಗಬೇಕು ಎಂದು ಹೇಳಿದರು.
ಶಂಕರಾಚಾರ್ಯರ ಸಿದ್ದಾಂತದ ಉಲ್ಲೇಖಗಳು ಅಸಂಖ್ಯಾತ ಅನ್ವೇಷಕರಿಗೆ ಅವರ ಆಧ್ಯಾತ್ಮಿಕ ಪ್ರಯಾಣದಲ್ಲಿ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡಿವೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಸಾಹಿತಿ ರಾಜಶೇಖರ ಎನ್., ಶಂಕರಾಚಾರ್ಯರು ಅದ್ವೈತ ವೇದಾಂತದ ಮೂಲಕ ಮಾಯಾವಾದವನ್ನು ವಿವರಿಸಿ, ಜ್ಞಾನದಿಂದಲೇ ಮೋಕ್ಷ ಸಾಧ್ಯ ಎಂದು ಜಗತ್ತಿಗೆ ಒತ್ತಿ ಹೇಳಿದರು. ಶಂಕರಾಚಾರ್ಯರು ನೀಡಿರುವ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಜಿಲ್ಲಾಧಿಕಾರಿ ಕಚೇರಿ ಶಿರಸ್ತೆದಾರ ಮಹಿಪತಿ ದೇಸಾಯಿ, ಸಮಾಜದ ಮುಖಂಡರಾದ ಶ್ರೀಹರಿ ಗೋಳಸಂಗಿ, ಮಹೇಶ ದೇಶಪಾಂಡೆ, ವೇದಮೂರ್ತಿ ಕೃಷ್ಣಭಟ್ಟ ಗಲಗಲಿ, ಅಶೋಕ ಕುಲಕರ್ಣಿ, ಶ್ರೀನಿವಾಸ ಬೆಟ್ಟಗೇರಿ, ಗಿರೀಶ್ ಕುಲಕರ್ಣಿ, ದೇವೆಂದ್ರ ಮಿರೆಕರ್ ಉಪಸ್ಥಿತರಿದ್ದರು.
ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದ ಶಂಕರಾಚಾರ್ಯರು ಮನುಕುಲಕ್ಕೆ ಸಾರಿದ ತತ್ವಾದರ್ಶಗಳು ದಾರಿದೀಪವಾಗಿವೆ-ಸೋಮಲಿಂಗ ಗೆಣ್ಣೂರ ಹೆಚ್ಚುವರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.