ವಿಜಯಪುರ:ಯಶಸ್ಸಿಗೆ ಅಡ್ಡ ಮಾರ್ಗಗಳಿಲ್ಲ. ಗುರಿ ಇಟ್ಟುಕೊಂಡು ಪ್ರಯತ್ನ ಮಾಡಿ. ಎಲ್ಲರಿಗೂ ಕಷ್ಟ ಇರುವುದೇ. ಚಿಂತೆ, ಕಷ್ಟ, ಯೋಚನೆ ಬದಿಗಿಟ್ಟು ಸಾಧನೆ ಮಾಡುವ ಹಾದಿ ಹಿಡಿಯಿರಿ, ಸಾಧಕರಾಗುತ್ತಿರಿ. ಒಂದು ಕ್ಷಣ ವ್ಯರ್ಥ ಮಾಡಬೇಡಿ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಸಲಹೆ ನೀಡಿದರು.
ತಮ್ಮಲ್ಲಿರುವ ಭಯ ದೂರ ಮಾಡಿವುದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳ ಮೊದಲ ಕೆಲಸ. ತಲೆಯಲ್ಲಿ ಋಣಾತ್ಮಕ ಭಾವನೆ ಇರಬಾರದು. ಮನಸ್ಸಿನಲ್ಲಿ ಆಸೆ ಹುಟ್ಟಬೇಕು. ಶಿಸ್ತು ಬರಬೇಕು, ಸಾಧನೆಗಾಗಿ ಪ್ರಯತ್ನ ಸಾಗಬೇಕು. ಆಗ ಇಟ್ಟ ಗುರಿ ತಲುಪಬಹುದು ಹೇಳಿದರು.
ಗ್ರಾಮೀಣ ಪ್ರದೇಶದಿಂದ ಬಂದವನು, ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ ಎಂಬ ಆತಂಕ ಬಿಡಿ. ನಾನು 1ರಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮ ಹಾಗೂ ಹಳ್ಳಿಯಲ್ಲಿ ಓದಿರುವೆ. ನಂತರ ಪಿಯುಸಿಯಲ್ಲಿ ವಿಜ್ಞಾನ ವಿಷಯ ಪಡೆದೆ. ಆರಂಭದಲ್ಲಿ ಕಷ್ಟವಾಯಿತು. ನಂತರ ಓದುವುದನ್ನು ದುಪ್ಪಟ್ಟು ಮಾಡಿ ಯಶಸ್ವಿಯಾದೆ ಎಂದರು.
ಸಾಧನೆ ಒಂದು ದಿನದಲ್ಲಿ ಸಾಧ್ಯವಿಲ್ಲ. ನಿರಂತರ ಪ್ರಯತ್ನ ಬೇಕು. ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂದು ಯೋಚಿಸಬೇಕು. ಮಾನಸಿಕವಾಗಿ ಸಿದ್ದವಾಗಬೇಕು. ಕಷ್ಟ ಸಹಿಸಿಕೊಳ್ಳಬೇಕು. ನಾನ್ ಸೆನ್ಸ್ ವಿಷಯಗಳಿಗೆ ಕೊಡುವ ಸಮಯ ನಿಲ್ಲಿಸಬೇಕು. ಜೀವನ ಅತ್ಯುತ್ತಮ ಮಾಡಿಕೊಳ್ಳಲು ಸಮಯ ಮೀಸಲಿಟ್ಟಿದ್ದೇವೆ ಎಂದು ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.