ADVERTISEMENT

ಬಡವರ ಪರವಾದ ಯೋಜನೆ ದೇಶದಲ್ಲೇ ಎಲ್ಲೂ ಇಲ್ಲ: ಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:18 IST
Last Updated 2 ಜೂನ್ 2025, 14:18 IST
ಕೊಲ್ಹಾರ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆಯನ್ನು ಸಚಿವ ಶಿವಾನಂದ ಪಾಟೀಲ‌ ಭಾನುವಾರ ಉದ್ಘಾಟಿಸಿದರು
ಕೊಲ್ಹಾರ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆಯನ್ನು ಸಚಿವ ಶಿವಾನಂದ ಪಾಟೀಲ‌ ಭಾನುವಾರ ಉದ್ಘಾಟಿಸಿದರು   

ಕೊಲ್ಹಾರ: ‘ಕೇವಲ ₹5ಕ್ಕೆ ಉಪಾಹಾರ, ₹10ಕ್ಕೆ ಮಧ್ಯಾಹ್ನದ ಊಟವನ್ನು ಇಂದಿರಾ ಕ್ಯಾಂಟಿನ್ ಮೂಲಕ ನೀಡಲಾಗುತ್ತದೆ. ಬಡಜನರ ಪರವಾದ ಇಂಥ ಯೋಜನೆ ದೇಶದಲ್ಲೇ ಎಲ್ಲೂ ಇಲ್ಲ. ಜಗತ್ತಿನ ಯಾವ ಸರ್ಕಾರಗಳೂ ಇಂಥ ಕಾರ್ಯಕ್ರಮ ನೀಡಿದ್ದನ್ನು ನಾನು ಕೇಳಿಲ್ಲ’ ಎಂದು ಸಚಿವ ಶಿವಾನಂದ ಪಾಟೀಲ ಬಣ್ಣಿಸಿದರು.

ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಲ್ಹಾರ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ಇಂದಿರಾ ಕ್ಯಾಂಟಿನ್, ಶಾಲಾ ದುರಸ್ತಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅನುಷ್ಠಾನಕ್ಕೆ ತಂದಿದ್ದ ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟಿನ್ ಯೋಜನೆಯನ್ನು ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿತ್ತು.‌ ಕಳೆದ ಎರಡು ವರ್ಷಗಳ ಹಿಂದೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಮತ್ತೆ ಇಂದಿರಾ ಕ್ಯಾಂಟಿನ್ ಯೋಜನೆಗೆ ಮರು ಚಾಲನೆ ನೀಡುವ ಮೂಲಕ ಬದ್ಧತೆ ತೋರಿದೆ. ಇಲ್ಲಿ ಆರಂಭಗೊಂಡಿರುವ ಇಂದಿರಾ ಕ್ಯಾಂಟಿನ್ ರಾಜ್ಯದ 186ನೇಯದ್ದು’ ಎಂದರು.

ADVERTISEMENT

ಕ್ಯಾಂಟಿನ್ ಉದ್ಘಾಟಿಸಿದ ಬಳಿಕ ಸಾರ್ವಜನಿಕರೊಂದಿಗೆ ಉಪಾಹಾರ ಸೇವಿಸಿ, ಉಪಾಹಾರ ಬಡಿಸಿದರು.

ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಜಿ.ಪಂ ಸದಸ್ಯ ಕಲ್ಲು ದೇಸಾಯಿ, ಪ.ಪಂ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ, ಮುಖಂಡರಾದ ಬಿ.ಯು. ಗಿಡ್ಡಪ್ಪಗೋಳ, ಎಸ್.ಬಿ. ಪತಂಗಿ, ಆರ್.ಬಿ. ಪಕಾಲಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ. ಸೌದಾಗರ, ಪ.ಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ ಇದ್ದರು.

‘ಶಾಲಾ ಕಟ್ಟಡ ದುರಸ್ತಿಗೆ ₹45 ಲಕ್ಷ’

‘ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರಕ್ಕೆ ಶಾಲಾ ಸುಧಾರಣೆಗಾಗಿ ಗಣಿ ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿಧಿಯಿಂದ ನೀಡಿರುವ ₹90 ಲಕ್ಷ  ಅನುದಾನದಲ್ಲಿ ₹45 ಲಕ್ಷ ಅನುದಾನವನ್ನು ಕೊಲ್ಹಾರ ಪಟ್ಟಣದ ಶಾಲಾ ಕಟ್ಟಡ ದುರಸ್ತಿಗೆ ನೀಡಿದ್ದೇನೆ’ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು. ‘ಕೊಲ್ಹಾರ ಪಟ್ಟಣ ಪುನರ್ವಸತಿ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಈಚೆಗೆ ಪಟ್ಟಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ₹50 ಕೋಟಿ  ಅನುದಾನ ಘೋಷಿಸಿದ್ದಾರೆ. ಇದರಿಂದ ಪಟ್ಟಣದ ಚಿತ್ರಣ ಬದಲಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.